Showing posts with label ಕವನ. Show all posts
Showing posts with label ಕವನ. Show all posts

Monday, September 3, 2012

ಆಡಿಸಿ ನೋಡು...ಬೀಳಿಸಿ ನೋಡು.....ಉರುಳಿ ಹೋಗದು .......


(ಸಿಂಗಾಪುರನ ಯುನಿವೆರ್ಸಲ್ ಸ್ಟುಡಿಯೋದ ಮೋಜಿನ ಸುತ್ತು ತಿರುಗೋ ಚಕ್ರ-BATTLESTAR GALLACTICA)
ಬದುಕ ಬಂಡಿ ಸುತ್ತಿಸಿತ್ತೋ...
ಮೇಲೆ ಕೆಳಗೆ ಆಡಿಸಿತ್ತೋ....
ತಿರುಗು ಮುರುಗೋ ಹೊರಳಿಸಿತ್ತೋ...

ಮೇಲೆ ಹೋಗಿ ನಕ್ಕಿದಿತ್ತೋ...
ಕಳಗೆ ಬಂದು ಅತ್ತಿದಿತ್ತೋ...

ನೇರ ಏರಿ ಕೇಕೆ ಹಾಕಿದಿತ್ತೋ...
ತಲೆಕೆಳಗಾಗಿ ಬೆಚ್ಚಿ ಕಿರುಚಿದಿತ್ತೋ....
 ಮತ್ತೆ ನೇರನಾಗಿ ಮುಕ್ತನೆನಿಸಿದಿತ್ತೋ...
ನೆನಸುವಾಗಲೇ ಮತ್ತೆ ಹೊರಳಿಸಿತ್ತೋ....

ತಂದೆತಾಯ ನೆನಸಿತ್ತೋ...
ಅಮ್ಮ ಎಂದು ಕೂಗಿದಿತ್ತೋ...

ಬದುಕ ಪಯಣ ಸೂತ್ರದಲ್ಲಿ ಎಲ್ಲವನ್ನು
ಕಾಣದಂತೆ ಬಂಧಿಸಿತ್ತೋ...

ಬೀಳದಂತೆ ಎಲ್ಲೋ ನಮ್ಮೆನೆಲ್ಲಾ
ಗಟ್ಟಿಯಾಗಿ ಹಿಡಿದಿತ್ತೋ...

ಅದರ ಜಾಡಿನಲ್ಲಿ
ಸುತ್ತಿ ಸುತ್ತಿ ತಿರುಗಿಸಿತ್ತೋ....

ಸೂತ್ರದಲ್ಲಿ  ತಿರೋಗೋ ಪಟದಂತೆ
ತಿರುಗುತ್ತಲ್ಲಿತ್ತೋ...

ಮುಗಿದ ಪಯಣ ಬೆರಗು ಭಯ
ವಿಸ್ಮಯದಲ್ಲಿತ್ತೋ....

ಕಾಣದಂತೆ ಧನ್ಯತೆಯ ಭಾವ ಹೊಮ್ಮಿತ್ತೋ....

Friday, February 10, 2012

ಅರಿಯಲಿಲ್ಲ ಅಂತರಾಳ !!!!!


ಅಲ್ಲಿ..... ಇಲ್ಲಿ..... ಅದು.... ಇದು...
ಮನದ ಕೊಸರು...ಹಾರಿ.... ಹೀರಿ...
ಮುದದ ಕೀರೀಟ... ಮೆರೆದ ಮನ....
ಮುರಿದ ಕಿರೀಟ .... ಮುದುರಿ ಮನ....
ಕೆದರಿ ಕೋಪ..... ಅರಿಯಲ್ಲಿ ತಾಪ...
ಅರಿಯ ಅರುಹು....ಸಮರ್ಥನೆಗೆ ಕೂಗು....

ಕೂಗಿನಲ್ಲಿ ಮರೆತ ಜ್ಞಾನ ....
ಅಂತರ್ಯದಲ್ಲಿ ಕದನ ಸದನ.....
ಹಿಂದೆ ಹೊಗಳು ಭಟ್ಟರು.....
ಮುಂದೆ ತೆಗಳೋ ಭಟರು......
ಹುಮ್ಮಸ್ಸಿನ ಹಾರಾಟ....
ಮಾತಿನಲ್ಲೇ ಸೆಣಸಾಟ...
ಕಳೆದ ಶಬ್ದ..... ಬಿಟ್ಟ ಬಾಣ...
ಅರಿಯ ಶವ... ನನ್ನ ಭಾವ....
ಕೊಲೆಗಾರನ ಹಣೆಪಟ್ಟ....

ಮರೆತ ಜ್ಞಾನ.....
ಮೆರೆದ ಅಜ್ಞಾನ...
ಕದನದಲ್ಲಿ ಸತ್ತ ನನ್ನ ಆಂತರ್ಯದ ಜನ...
ಹಿಂದೆ ತಿರುಗೆ ಎಲ್ಲ ಶೂನ್ಯ....

ಹೊಗಳಿಕೆಯ ಹೆಗಲಲ್ಲಿ ಶವದ ಮೆರವಣಿಗೆ...
ತೆಗಳಿಕೆಗೆ ಕೋಪದಲ್ಲಿನ ಧಾವಂತ....
ಭಾಷೆ-ಮಾನವತೆಯಲ್ಲಿ ಮನವೇ ಅಸ್ತ೦ಗತ ....
ಪರ-ವಿರೋಧದ ಹೋರಾಟದಲ್ಲಿ...
ಕಳೆದು ಹೋದ ನಮ್ಮ ಭಾಷೆ -ಭವಣೆ....
ಕೊನೆಯಲ್ಲಿ ಅವನಿಗೂ... ನನಗೂ...
ಇಲ್ಲದ ಭೇದ...
ಹಾಗಾದ ಮೇಲೆ ಅರ್ಥ ಕಳೆದುಕೊಂಡ ಕದನ...
ಮುರಿದು ಹೋದ ಮನಗಳ ಮಸಣ...

ಅಂತರ್ಯದಲ್ಲಿ ಸಾದಿಸೆ ಭುದ್ಧ....
ಜನನ-ಮರಣಕ್ಕೆ ದಿವ್ಯ ಮೌನ....

ಶುನಕದ ಬೊಗಳಿಕೆ...
ದಿವ್ಯ ನಿರ್ಲಕ್ಷದಲ್ಲಿ ಕುಂಜರದ ನಡೆ...
ನಡೆ.. ದ್ಯಾನದೆಡೆಗೆ..
ನಿರ್ಲೀಪ್ತತೆಯಲ್ಲಿ...
ಚಿರನೂತನ ನಿರಂತರ ಚೇತನದ ಕಡೆಗೆ...




Saturday, October 8, 2011

ಹಕ್ಕಿಗೆ ಚೆಲ್ಲಾಟ -ಚಿಟ್ಟೆಗೆ ಪ್ರಾಣ ಸಂಕಟ

(ಚಿತ್ರ ಕೃಪೆ - ಕೆ ಶಿವೂ -ಛಾಯಾ ಕನ್ನಡಿ ಅಂಕಣದ ಒಡೆಯರು )



ಅಷಿಪ್ರಿನಿಯಾದ ಹಸಿವೆಗೆ ಚಿಟ್ಟೆ ಸಿಕ್ಕಿತ್ತು......

ಹೊಂಚಿ ಹಾಕಿದ ಬೇಟೆ ತಿನ್ನೋ ಗಮ್ಮತ್ತು....

ತಪ್ಪಿಸಿ ಹಾರಲು ಅವಿರತದ ಹೋರಾಟ..
ಸುತ್ತಮುತ್ತೆಲ್ಲಾ ಚದುರಿದ್ದು ಬಣ್ಣ ಓಕುಳಿಯಾಟ...

ರೆಕ್ಕೆಗಂಟಿದ ವರ್ಣ ಹುಡಿಯಾ ಚೆಲ್ಲಾಟ...
ತಂದಿತ್ತುದು ಪ್ರಾಣ ಸಂಕಟ....

ದೂರದಲ್ಲೆಲೋ ಕ್ಯಾಮರ ಕಣ್ಣಿನ ನೋಟ....
ಜುಮಾಯಿಸಿ ತೆಗೆದುದು ವರ್ಣ ಪಟ....

ನನ್ನ ಪ್ರಾಣದ ಜೊತೆಯಾಟ.....
ಒಬ್ಬರಿಗೆ ಹಬ್ಬದೂಟ...
ಇನ್ನೊಬ್ಬರಿಗೆ ಬಹುಮಾನಕ್ಕೆ ಚಿತ್ರಪಟ....
ನೋಡಿ ವಾ ಎನ್ನುವ ಕಂಗಳಿಗೆ ರಸದೂಟ....
ಕೆಲವು ಕವಿಗಳ ಕಾವ್ಯಕ್ಕೆ ಸ್ಫೂರ್ತಿಯ ಪಟ ....

Friday, January 14, 2011

ಮರೀಚಿಕೆಯ ಬೆನ್ನ ಹತ್ತಿ

ಅತ್ತ....ಇತ್ತ ... ಸುತ್ತ.... ಹರಿದು....
ಮನದ ಆಳದಲ್ಲಿ ಮತ್ತ ಬರಿಸಿ......
ಗಿರಿಗಿಟ್ಟಿಯಂತೆ ತಿರುತಿರುಗಿಸಿ.....
ಎತ್ತೋ ಒಯ್ದು ....
ಕಾಣದಂತೆ ....
ಎತ್ತೋ ಸರಿದು....
ಓಡಿ ಹೋದೆ!
ದಾರಿ ಕಾಣದೆ
ಹೆದರಿ ಬೆದರಿ
ಅತ್ತು ಕರೆದು
ಅತ್ತಿತ್ತ ನೋಡುತಿರಲು
ನೀನು ಕಾಣೆ.....

ಬೆನ್ನ ಹತ್ತಿ ದಾರಿ ಹುಡುಕಲೆಂದೇ .....
ಕವಲಿನಲ್ಲಿ ಬಂದು ನಿಂತು .....
ಎತ್ತ ಎತ್ತ ಎಂದು ಕನವರಿಸೆ.....
ಎತ್ತಲಿಂದೋ ಪಕಪಕನೆ
ನಕ್ಕ ಸದ್ದು....

ಹಿಂದೆ ಸರಿಯೇ...
ಮುಂದೆ ಅರಿಯೆ....
ನನ್ನ ಪ್ರಶ್ನೆ
ಇದು ನಿನಗೆ ತರವೇ????

Tuesday, December 14, 2010

ನವನೀತ

(ಚಿತ್ರ ಅಂತರ್ಜಾಲ ಕೃಪೆ - ದೊಡ್ದಮಾಳುರಿನ ಅಂಬೆಗಾಲು ಕೃಷ್ಣ)


ಮೊನ್ನೆ ೧೨ನೆ ತಾರೀಕಿಗೆ ನನ್ನ ಮಗನ ನಾಮಕರಣ ಶಾಸ್ತ್ರ ಮುಗಿಸಿದೆವು.
ಅವನಿಗೆ ಇಟ್ಟ ಹೆಸರು "ನವನೀತ"
ಈ ಸಂಧರ್ಭದಲ್ಲಿ ಮಿತ್ರ ವಾಮನ ಬರೆದ "ನವನೀತ" ಭಾವಗೀತೆಯನ್ನು ಸಂಧರ್ಭಕ್ಕೆ ಒಪ್ಪುವಂತಿರುವದರಿಂದ ಅವರ ಒಪ್ಪಿಗೆಯೊಂದಿಗೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.


"
ನವನೀತ"-ಭಾವಗೀತೆ
ಬರೆದವರು : ವಾಮನ ಕುಲಕರ್ಣಿ
(ಅವರ "ತೆರೆಗಳು" ಕವನ ಸಂಕಲನದಿಂದ ಆಯ್ದದ್ದು)

ಎದೆಯಲ್ಲಿ ಭಾವ ಕಡೆದಾಗ ಬಂತು
ನವನೀತ ನನ್ನ ಕವನ.
ಹೂತಿಟ್ಟ ಸುಮಕೆ ಹೂಗಂಧ ಸವರಿ
ದಾಳಿಂಬ ಬಿರಿದ ವದನ.

ಮುಗಿಲಲ್ಲಿ ಮೋಡ ಗುಡುಗುಡುವ ರಾಗ
ಶ್ರುತಿ ಆಲೆಯ ಧಾರೆ ಮಳೆಯು.
ತೊರೆಯಾಗಿ ಝರಿಯು ಗಿರಿಯಿಂದ ಧುಮುಕಿ
ಕಾಲುವೆಗಳಾಗಿ ಕೆರೆಯು.

ಈ ಜಗದ ದುಂಬಿ ಮಧುವನ್ನು ಈ೦ಟೀ
ಸಂಚಯಿಸಿ ಜೇನಗೊನೆಯು
ಮಧುಮಧುರ ಸಿಹಿಯ ಈ ಜಗಕೆ ಹಂಚಿ
ಹಂಚುವನು ದಾನಿ ಕವಿಯು.

ಹಾಲ್ಗಾಳ ಹೊತ್ತ ತೆನೆತೆನೆಗೂ ಅಲ್ಲಿ
ಮುಗಿಬಿದ್ದ ಹಕ್ಕಿ ಹಿಂಡು
ಹೊಂಬಣ್ಣ ಸಂಜೆ ಸೆರಗನ್ನು ಹಿಡಿದು
ಗುಟುಕಾಗಿ ತಂದ ಬಂಡು.

ಸಲಗಗಳ ದಂಡು ಭೋರಾಡಿ ಮದದಿ
ಕಿಚ್ಚತ್ತಿ ಕಾಡು ಉರಿದು.
ಖೆಡ್ಡಗಳ ಕಟ್ಟಿ ಸಲಗಗಳ ಒಟ್ಟಿ
ನಿಟ್ಟುಸಿರ ಬಿಟ್ಟ ಕವಿಯು.

ಭಾವಗಳ ಬೆನ್ನ ಹತ್ತುತ್ತ ನಡೆದು
ಏನೇನೋ ಕಂಡ ಮಗುವು.
ಎದ್ದೆದ್ದು ಬಿದ್ದು ಭಯದಲ್ಲಿ ಅತ್ತು
ಹಾಲ್ಗೆನ್ನೇ ತೊದಲು ನುಡಿಯು.

ಕುರುಡನಿಗೆ ನಯನ ಮುಕನಿಗೆ ಮಾತು
ನೀಡಿಲ್ಲ ನನ್ನ ಕವನ.
ಮೊಲೆಯುಣಿಸಿ ತಾಯಿ ನೋವುಗಳ ಒರೆಸಿ
ಸಾಂತ್ವನ ಕವಿಯ ನಯನ.

ಭುವಿಯಲ್ಲಿ ಬೀಜ ಛಲದಿಂದ ಸಹಜ
ಮುಟ್ಟುವದು ದೂರ ಗಗನ.
ಗಿಡದಲ್ಲಿ ಕುಸುಮ ಹೋಲಿಕೆಯು ಅಸಮ
ಸೌರಭವು ನನ್ನ ಕವನ.

ಆ ರವಿಯ ತಂದು ಕಣ್ಣಲ್ಲಿ ಇಟ್ಟು
ನೀ ದಿನವು ಹುಟ್ಟು ಇಲ್ಲಿ.
ಉರಿಯಾಗಿ ನನ್ನ ದಿನದಿನವು
ಸುಟ್ಟು ಬೆಳಕಾಗು ಜನರಿಗಿಲ್ಲಿ.






Thursday, September 30, 2010

ಮಗುವಿನ ಅಳಲು


ಗತಿಸಿದ ನೆಚ್ಚಿನ ಅಜ್ಜ ಪಿಜ್ಜರ
ಹೆಸರ ಹಿಡಿದು
ನನ್ನ ಕೂಗಿ
ಲಲ್ಲೆಗರೆವ ಜನರೇ.....

ಮುದ್ದು, ಮೊದ್ದು,
ಪುಟ್ಟ, ಕಿಟ್ಟ,
ಕಳ್ಳ, ಮಳ್ಳ,
ತುಂಟ, ಎಂಬ ವಿಶೇಷಣದೀ
ಮುದ್ದುಗರೆವ ಜನರೇ.....

ಬಂಗಾರು, ಚಿನ್ನ,
ರನ್ನ, ರತುನ,
ಮುತ್ತು, ಹವಳ
ಎಂಬ ಅಮೂಲ್ಯಗಳ
ಹೆಸರಲ್ಲಿ ಮುದ್ದಿಸುವ ಜನರೇ....

ಎಲ್ಲ- ಏನೋ,
ಹೇಳಿ ಕರೆದರೇ
ಕತ್ತು ಎತ್ತಿ ನೋಡೋ
ಹವ್ಯಾಸಕ್ಕೆ
ನಾನು ಒಗ್ಗೋ ಮುನ್ನ
ನನಗೆ ನನ್ನದಾದ
ಒಂದು ಹೆಸರು ಇಟ್ಟು ಬಿಡಿ!

Thursday, May 13, 2010

ಶರಾಬು ಕುಡಿದ ವಿದ್ಯುತ್

ಕರ್ನಾಟಕದಲ್ಲಿ ಹತ್ತು ಹಲವು ನದಿಗಳು
ನೂರಿಪ್ಪತ್ತು ಜಲಪಾತಗಳು
ಆದರೂ ಬೆರಳೆಣಿಕೆಯ ಜಲವಿದ್ಯುತ್ ಯೋಜನೆಗಳು !!

ಸುಡುತಿರುವೆವು ದೂರದದೆಲ್ಲಿಂದಲೋ ಕಲ್ಲಿದ್ದಲು ತಂದು
ನಾಗರಿಕ ಪೂರೈಕೆಯ ವಿದ್ಯುತ್ ಉತ್ಪಾದನೆಗೆಂದು !!

ಆದರೂ ನಾಗರಿಕರ ಬೇಡಿಕೆಯನ್ನು
ಪೂರೈಸದ ವಿದ್ಯುತ್ ನಿಗಮ
ಶರಾಬ್ ಕುಡಿದ೦ತೆ ನಿರತ ಹತ್ತಿ ಆರುವ
ಕಣ್ಣು ಮುಚ್ಚಾಲೆಯ ವಿದ್ಯುತ್ ದೀಪ
ಕಳೆಯದು ನಮ್ಮನ್ನು ಆವರಿಸಿಹ ತಮ
ಜೊತೆಗೆ ರಶೀದಿಯಲ್ಲೂ ಆಗಿದೆ
ವಿದ್ಯುತ್ ಸರಬರಾಜು -ಶರಬರಾಜು ಎ೦ದು
ಅಳುತಿಹಳು ಕನ್ನಡಮ್ಮ ನಮ್ಮ
ಇಚ್ಚಾಶಕ್ತಿ ಮತ್ತು ಕನ್ನಡ ಭಾಷಾಜ್ಞಾನ ಕಂಡು !!!


ಇದು ನನ್ನ " ಒಂಚೂರು ಅದು ! ಇದು! " ಅಂಕಣದ ೫೦ನೇ ಬರಹ. ಸಂಧರ್ಭದಲ್ಲಿ ಓದಿ ಹರಸಿದ ಎಲ್ಲ ಸಹೃದಯ ಓದುಗರಿಗೂ ವಿನೀತನಾಗಿ ವಂದನೆಗಳನ್ನರ್ಪಿಸುತ್ತೇನೆ. ತಮ್ಮ ಪ್ರೀತಿ, ಅಭಿಮಾನ ಮತ್ತು ಹಾರೈಕೆ ಸದಾ ಇರಲಿ ಎ೦ದು ಕೋರಿಕೊಳ್ಳುವೆ.