Showing posts with label ವಿಮರ್ಶೆ. Show all posts
Showing posts with label ವಿಮರ್ಶೆ. Show all posts

Thursday, July 26, 2018

ಓದಿನ ಅನುಭವಯಾನ - ಹಂಸಯಾನ (ಕಾದಂಬರಿ)- ತೇಜಸ್ವಿನಿ ಹೆಗಡೆ -ಜಯಶ್ರೀ ಪ್ರಕಾಶನ






ಬಹಳ ದಿನಗಳ (ವರ್ಷಗಳೇ ಇರಬಹುದು) ನಂತರದ ನನ್ನ ಓದಿನ ಯಾನ ಮತ್ತೆ ಪ್ರಾರಂಭವಾಗಿದ್ದು ಬ್ಲಾಗ್ ಸಹೃದಯಿ  ತೇಜಸ್ವಿನಿಯವರ "ಹಂಸಯಾನ" ಕಾದಂಬರಿಯೊಂದಿಗೆ,,,

ಕಾದಂಬರಿಯ ಸುಂದರ ಚಿತ್ರ, ಅದಕ್ಕೆ ಪೂರಕವಾದ ಹೆಸರು  ಜೊತೆಗೆ ತೇಜಸ್ವಿನಿಯವರ ಬರಹದ ಬಗ್ಗೆ ಗೊತ್ತಿದ್ದ ನಾನು, ಇದನ್ನು ಯಾವದೋ ಪ್ರೇಮ ಅಥವಾ ಸಾಮಾಜಿಕ ಕಾದಂಬರಿ (ನನ್ನ ಅಲ್ಪಾಸಕ್ತಿ ವಿಷಯ) ಎಂಬ ಪೂರ್ವಕಲ್ಪಿತದೊಡನೆ ಸಹೃದಯಿಯ ಬರಹ ಎನ್ನುವ ಓಘದೊಡನೆ ಓದನ್ನು ಪ್ರಾರಂಭಿಸಿದೆ.. ಅರ್ಪಣೆ ಓದುತ್ತಿದ್ದ ಹಾಗೆ ನನ್ನ ಕಲ್ಪಿತ ಇನ್ನೂ ಸ್ಪಷ್ಟವೆನಿಸಿತು... ಶ್ರೀಮತಿ ಜ್ಯೋತಿಯವರ ಮುನ್ನುಡಿ ಮಾತ್ರ ಓದಿನ ಕುತೂಹಲವನ್ನು ಹೆಚ್ಚಿಸಿ, ಏನೋ ಒಂದು ರಹಸ್ಯ ಭೇಧನೆ ಇದೆ ಎನ್ನುವ ಸುಳುಹಿನೊಂದಿಗೆ, ಪತ್ತೇದಾರಿ ಕಾದಂಬರಿ ಪ್ರಿಯನಾದ ನನಗೆ ಓದಿನ ಆಸಕ್ತಿ ಇನ್ನೂ ಹುಟ್ಟಿಸಿತು, ಜೊತೆಗೆ ಸಿಂದೂರಾವ್ ರ ಬೆನ್ನುಡಿ- ಕಾದಂಬರಿಯಯು ಗಟ್ಟಿ ಹಿಡಿತದ ಸರಕು ಹೊಂದಿದೆ ಎಂಬ ವಿವರಣೆಯೊಂದಿಗೆ, ಕಾದಂಬರಿಯನ್ನುಓದಲು ಬಲವಾದ ದೃಢತೆ ಮೂಡಿಸಿತು... 

ಲೇಖಕಿಯ ಮುನ್ನುಡಿಯು ಕಾದಂಬರಿ ಗುಟ್ಟು ಬಿಟ್ಟು ಕೊಡಲಿಲ್ಲ... 
ಕಾದಂಬರಿ ಪ್ರಾರಂಭದ ಸಾಲುಗಳನ್ನು ಓದುತ್ತ ಇದ್ದ ಹಾಗೆ ಆಸಕ್ತಿ ಹೆಚ್ಚುತ್ತಾ... ಹೋಯಿತು.... ಕಥೆ ಓದುತ್ತಿದ್ದಂತೆ ಓದಲ್ಲಿ ಕಳೆದಿದ್ದ ನಾನು ಕಣ್ಣೆತ್ತಿ ನೋಡುವ ಘಳಿಗೆಯಲ್ಲಿ (ಅದು ಯಾರೋ ಕರೆದುದ್ದಕ್ಕೆ) ಪುಸ್ತಕದ ೭೦ ಪುಟಗಳನ್ನೂ ಓದಿಯಾಗಿತ್ತು ಒಂದೇ ಯಾನದಲ್ಲಿ...   
ಮತ್ತೆ ರಾತ್ರಿ ಹಿಡಿದು ಕುಳಿತರೆ ಮುಗಿಸಿಯೇ ಮಲಗಲು ಎದ್ದಿದ್ದು... 
ಮಧ್ಯೆ ಮಧ್ಯೆ ಕೊನೆಯ ಅಧ್ಯಾಯ ಮೊದಲು ಓದೋಣ ಎನಿಸಿದ್ದು ಉಂಟು ಆ ಪರ್ಯಾ ಕುತೂಹಲ ... 
ಹಂಸಯಾನದ ಬಗ್ಗೆ ಹೇಳಬೇಕೆಂದರೇ 
ಅದೊಂದು ಭಾವಯಾನ.. ವಿಸ್ಮಯಯಾನ..   ರಹಸ್ಯಯಾನ... ಅಧ್ಯಾತ್ಮಯಾನ.. ಜೀವನಯಾನ... ಲೌಕಿಕ ಯಾನ...  

ಕಾದಂಬರಿ ನಾವು ಪತ್ತೇದಾರಿ, ಸಾಮಾಜಿಕ, ಆಧ್ಯಾತ್ಮಿಕ, ಎಂದೆಲ್ಲ ಒಂದೇ ಶಬ್ದದಲ್ಲಿ ಹಿಡಿದಿಡಲಾಗದ ಮತ್ತು ಎಲ್ಲವನ್ನು ಬಿಡಲಾಗದ ಒಂದು ವಿನೂತನ ಪ್ರಯೋಗದ ಕಾದಂಬರಿ.. 

ಯಾನದ ಹಂಸೆ ಮಹತಿ ಹೊಂದಾಣಿಕೆಯ, ಎಲ್ಲರಲ್ಲೂ ಒಂದಾಗುವ, ಎಲ್ಲರನ್ನು ನಂಬುವ ಮತ್ತು ಅಷ್ಟೇ ಹುಷಾರಿನಲ್ಲಿ ವ್ಯವಹರಿಸುವ ಚತುರೆ.  ಬಾಲ್ಯದ ಆಘಾತಗಳ ದುಸ್ವಪ್ನಗಳೊಂದಿಗೆ ಬದುಕನ್ನು ಚೆಲ್ಲದೇ ಅದನ್ನು ಚೊಕ್ಕವಾಗಿ ಬೆಳೆಸಿ... ಬಾಲ್ಯದ ಆಘಾತಗಳ ಹಿಂದಿನ ರಹಸ್ಯ ಶೋಧನೆಗೆ ತನ್ನನ್ನು ತಾನು ಪ್ರೇರೇಪಿಸಿ, ಸಾಹಸಯಾನ ಪ್ರಾರಂಭಿಸಿ ಆದ್ಯಾತ್ಮಯಾನ ಮತ್ತು ಲೌಕಿಕಯಾನದಲ್ಲಿ ವಿಸ್ಮಯಗಳನ್ನು ಛೇದಿಸಿ... ದುಸ್ವಪ್ನಗಳನ್ನು ಶಾಶ್ವತವಾಗಿ ನಿವಾರಿಸುವ ಯಾನವೇ.. ಕಾದಂಬರಿ ಹೂರಣ. 

ಬದುಕಿನ ಪಾತ್ರಗಳು ಹಾಗೂ ಅವುಗಳ ಒಪ್ಪ ಚಿತ್ರಣ ಕಾದಂಬರಿಯ ಮುಖ್ಯ ಅಂಶಗಳಾಗಿದ್ದು  ಎಲ್ಲೂ ಲೇಖಕಿಯ ಮೊದಲ ಹೆಜ್ಜೆ (ಕಾದಂಬರಿ) ಎನಿಸುವದೇ ಇಲ್ಲ. ಪ್ರತಿಯೊಂದು ಪಾತ್ರ ಚಿತ್ರಣ, ಘಟನಾವಳಿಗಳು, ಒಂದೊಂದು ಒಂದಕ್ಕೆ ಪೂರಕವೆನಿಸಿ ಓದುಗರನ್ನು ಓದಿನಲ್ಲಿ ಬಿಗಿಹಿಡಿಯುವಲ್ಲಿ ಗೆದ್ದಿವೆ. ೧೭೦ ಪುಟಗಳಲ್ಲಿನ ಸಂಯಮದ ಕಥಾಯಾನ ಕುತೂಹಲವನ್ನು ಹೆಚ್ಚಿಸುತ್ತ ಇದ್ದರೇ, ಮುಂದಿನ ೭೦ ಪುಟಗಳಲ್ಲಿ ನಾಗಾಲೋಟದ ಯಾನವಾಗಿ ಎಲ್ಲ ಕುತೂಹಲವನ್ನು ತೊಳೆದಿಡುತ್ತದೆ. ಹೀಗಾಗಿ ಮೊದಲಿನ ೧೭೦ ಪುಟದ ಭಾಗ ಎಳೆಯಲ್ಪಟ್ಟಿತೆ... ಅಥವಾ ಕೊನೆಯ ೭೦ ಪುಟಗಳ ಭಾಗ ಅವಸರಿಸಲ್ಪಟ್ಟಿತೆ.. ಎನ್ನುವ ಭಾವ ಓದುಗನಲ್ಲಿ ಬಂದರೂ ಯಾವದು ಸರಿ ಎನ್ನುವ ತೀರ್ಮಾನಕ್ಕೆ ಬರಲು ಆಗುವದಿಲ್ಲ. ಏಕೆಂದರೆ ಮೊದಲಿನ ಭಾಗ ಓದುವಾಗ ಅವನಿಗೆ ಎಳೆದಂತೆ ಅನಿಸದೇ ಕುತೂಹಲ ಹೆಚ್ಚಿ ಯಾವಾಗ ವಿಸ್ಮಯ ಹರೀದೀತು ಎನ್ನುವ ತವಕದಲ್ಲಿರುವಾಗ... ಮುಂದಿನ ಭಾಗದಲ್ಲಿ ಅದು ವೇದ್ಯವಾಗುವಾಗ ಅಲ್ಲಿ ಶಬ್ದಗಳು ಕಡಿಮೆ ಆದವೇನೋ .. ಇನ್ನು ಹೇಳಬೇಕಿತ್ತೇನೋ ಎನ್ನುತ್ತಿರುವ ಭಾವದಲ್ಲಿ ಎಲ್ಲ ವಿಸ್ಮಯಗಳು ಬೇಗ ಪರಿಹಾರವಾದವೆಲ್ಲ ಎಂಬ ಅನುಭೂತಿ...  ಅದೂ ಸರಿ ಎಂದು ಒಪ್ಪುವ ದ್ವಂದ್ವತೆಗೆ  ಓದುಗನನ್ನು ದೂಡುತ್ತದೆ.  ಆದರೂ ಗುಡ್ಡದಜ್ಜನ ವಿಸ್ಮಯ,  ಕಣ್ಣಿಲ್ಲದಿದ್ದರೂ ಎಲ್ಲವನ್ನು ಸ್ಪಷ್ಟವಾಗಿ ನೋಡಬಲ್ಲ ಕುರುಡು ಕಾಳವ್ವಜ್ಜಿ ಇನ್ನೂ ಬೇಕಾಗಿತ್ತು ಎನ್ನುವ ತುಡಿತ ಓದುಗರನ್ನು ಕಾಡುವದಂತೂ ನಿಜ. ನಚಿಕೇತನ ಚಿತ್ರಣ ಇನ್ನು ಬೇಕಿತ್ತು ಎನಿಸುತ್ತದೆ. ಅವರಿಬ್ಬರ ಪ್ರೇಮಕಥೆಯಾಗಿ ಕಾದಂಬರಿ ಮುಂದುವರಿಯಬೇಕಿತ್ತು ಎಂದೂ ಎನಿಸುತ್ತದೆ.   ಕೊನೆಯಲ್ಲಿನ ಇಂದುಲೇಖ ಕಥೆಗಾರ್ತಿ ಹೆಸರು ಓದುಗರನ್ನು ವಿಸ್ಮಯಕ್ಕೆ ಒಡ್ಡುವ ತಂತ್ರವು ವಿಶಿಷ್ಟವೆನಿಸುತ್ತದೆ. 

ಪರಮಹಂಸರ ಅಧ್ಯಾತ್ಮದ ತಿರುಳನ್ನು, ಅನುಭವಗಳನ್ನೂ, ಅನುಭೂತಿಗಳನ್ನು, ದಾಖಲೆಗಾಗಿ ದಾಖಲಿಸಿ ಓದುಗರ ಕಲ್ಪನೆಗೆ ಬಿಟ್ಟು... ಅನುಭೂತಿಗಳನ್ನು ಅಕ್ಷರದಲ್ಲಿ ಬಂಧಿಸುವ ಕ್ರಿಯೆಯಲ್ಲಿ ಅದು ತೆಳು ಅನುಭವವಾಗುವ ಅಪಾಯವನ್ನು  ಹೇಳುತ್ತಾ ಓದುಗರ ಕಲ್ಪನಾ ಓಘಾಲೋಟಕ್ಕೆ ಬಿಡುವ ಲೇಖಕಿಯ ಪರಿ ನಿಜಕ್ಕೂ ಅಭಿನಂದನೀಯ. 

ಪತ್ತೇದಾರಿ ಕಾದಂಬರಿ ಎಂದು ಸಾಮಾನ್ಯ ಓದುಗನಿಗೆ ಅನಿಸಿದರೆ, ಭಾವುಕರಿಗೆ ಭಾವಯಾನ, ಆಧ್ಯಾತ್ಮಿಕ ಒಲವಿನ ಓದುಗರಿಗೆ ಅಧ್ಯಾತ್ಮಯಾನ ಎನಿಸುತ್ತದೆ. 

ಇನ್ನೂ  ಬೇಕೇನುತ್ತಿರುವಾಗಲೇ ಕಾದಂಬರಿ ಅಂತಿಮ ರಹಸ್ಯಗಳನ್ನು ತೆರೆದಿಟ್ಟು ಮುಕ್ತಾಯಕ್ಕೆ ದೂಡುತ್ತದೆ.  ಓದುಗನಿ ರಹಸ್ಯ ಛೇದವಾದ ಸಂತಸದಲ್ಲಿ ಕಾದಂಬರಿ ಹರಹು ಇನ್ನು ಬೇಕಿತ್ತು ಎನ್ನುವ ಭಾವ ನಗಣ್ಯವಾಗುತ್ತದೆ. 

ಒಟ್ಟಿನಲ್ಲಿ ಕಾದಂಬರಿ ಕುತೂಹಲದಲ್ಲಿ ಓದಿಸಿ,  ಬಹುಕಾಲ ಮನದಲ್ಲಿ ಉಳಿಯುವಂತಹದು.




Saturday, August 14, 2010

ಎಸ್.ಎಲ್.ಭೈರಪ್ಪನವರ "ಕವಲು" -ನಾ ಕಂಡಂತೆ






ಕಾದಂಬರಿ : ಕವಲು
ಲೇಖಕರು : ಸಂತೆಶಿವರ.ಲಿಂಗಣ್ಣಯ್ಯ.ಭೈರಪ್ಪ
ಪುಟಗಳು : ೩೦೦
ಬೆಲೆ : ರೂಪಾಯಿ-೨೫೦
ಪ್ರಕಾಶನ : ಸಾಹಿತ್ಯ ಭಂಡಾರ ಪ್ರಕಾಶನ, ಜಂಗಮ ಮೆಸ್ತ್ರೀಗಲ್ಲಿ, ಬಳೆಪೇಟೆ,ಬೆಂಗಳೂರು.

ಸಾಹಿತಿ ಪರಿಚಯ : ಸಂತೇಶಿವರದಲ್ಲಿ (ಚನ್ನರಾಯಪಟ್ಟಣ ತಾಲುಕು ಹಾಸನ ಜಿಲ್ಲೆಯಲ್ಲಿ) ಹುಟ್ಟಿದ ಭೈರಪ್ಪನವರು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು, ಓದಿಗಾಗಿ ಹತ್ತು ಹಲವಾರು ಕೆಲಸಗಳನ್ನೂ ಮಾಡಿ, ತದನಂತರ ಕೆಲವು ಕಾಲ ಅಲೆಮಾರಿ ಜೀವನ ನಡೆಸಿ (ಮು೦ಬಯಿಯಲ್ಲಿ), ಆಮೇಲೆ ಮೈಸೂರಿಗೆ ಹಿಂದುರಿಗಿ ಓದು ಮುಂದುವರೆಸಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರರ ಕಥೆಗಳಿಂದ ಪ್ರಭಾವಿತರಾದ ಅವರು ಬಾಲ್ಯದಲ್ಲೇ ಸಾಹಿತ್ಯದ ಗೀಳು ಹಿಡಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ(೧೩) ಅವರು ಸ್ವಾತ೦ತ್ರ್ಯಹೋರಾಟದಲ್ಲೂ ಧುಮಿಕಿದ್ದರು. ಮೈಸೂರು ವಿಶ್ವ ವಿಧ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕ ಪದವಿಯನ್ನ ಪಡೆದ ಭೈರಪ್ಪನವರು , ಸತ್ಯ ಹಾಗೂ ಸೌ೦ದರ್ಯದ ಬಗ್ಗೆ ಸ೦ಶೋಧನಾ ಗ್ರಂಥ ಬರೆದು ಬರೋಡಾ ವಿಶ್ವವಿಧ್ಯಾಲಯದಿಂದ ಪಿ.ಹೆಚ್.ಡಿ. ಪದವಿಯನ್ನೂ ಸಂಪಾದಿಸಿದ್ದಾರೆ. ಅವರು ಗುಲಬರ್ಗಾ ವಿಶ್ವವಿಧ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

ಸುಮಾರು ೨೨ ಕಾದಂಬರಿಗಳನ್ನ (ಭೀಮಕಾಯ, ಧರ್ಮಶ್ರೀ, ದೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೇ, ಗೃಹಭಂಗ,ನಿರಾಕರಣ, ಗ್ರಹಣ, ದಾಟು, ಅನ್ವೇಷಣೆ, ಪರ್ವ, ನೆಲೆ, ಸಾಕ್ಷಿ, ಅಂಚು, ತಂತು, ಸಾರ್ಥ, ಮಂದ್ರ, ಆವರಣ ಮತ್ತು ಕವಲು) ಬರೆದ ಭೈರಪ್ಪನವರು ಕನ್ನಡದ ಅಪರೂಪದ ಸಾಹಿತಿ. ಅವರ ಎಲ್ಲ ಕೃತಿಗಳು ವಸ್ತು ಮತ್ತು ತಂತ್ರ ವೈಶಿಷ್ಟ್ಯ ಹಾಗು ವೈವಿಧ್ಯ ಹೊಂದಿದ್ದು, ಓದುಗರನ್ನು ಅಪಾರ ಆಕರ್ಷಣೆ ಮಾಡುತ್ತವೆ. ಹೀಗಾಗಿ ಭೈರಪ್ಪನವರು ಅಪಾರ ಓದುಗರನ್ನು ಪಡೆದ ಮತ್ತು ಜನಪ್ರಿಯ ಲೇಖಕ. ಅವರ ಕಾದಂಬರಿಗಳಲ್ಲಿ ಕಥಾ ವಸ್ತುಗಳು ತೀವ್ರ ಸಂಶೋಧನೆಯ ಸತ್ಯದಲ್ಲಿ ಅವಿರ್ಭವಿಸಿರುವದು, ಸರಳ ಭಾಷೆಯಲ್ಲಿ ಹೇಳಲ್ಪಟ್ಟಿರುವದು ಮತ್ತು ಸಮಕಾಲಿನ ಜ್ವಲಂತ ವಿಷಯಗಳ ಸುತ್ತ ವಸ್ತು-ನಿಷ್ಟುರತೆಯ ಹೊಂದಿರುವದರಿಂದ ಓದುಗರಿಗೆ ಅಪ್ಯಾಯ ಮಾನವೆನಿಸುವದು. ಅವರ ಕಾದಂಬರಿಗಳು ಹತ್ತು ಹಲವಾರು ಭಾಷೆಗೆ ತರ್ಜುಮೆಯಾಗಿ ಅಲ್ಲೂ ಮನ್ನಣೆ ಪಡೆದಿವೆ. ಇದಲ್ಲದೆ ಅವರು ೪ ತತ್ವಶಾಸ್ತ್ರ ಗ್ರಂಥಗಳನ್ನು(ಸತ್ಯ ಮತ್ತು ಸೌಂದರ್ಯ, ಸಾಹಿತ್ಯ ಮತ್ತು ಪ್ರತೀಕ, ಕಥೆ ಮತ್ತು ಕಥಾವಸ್ತು ಹಾಗೂ ನಾನೇಕೆ ಬರೆಯುತ್ತೇನೆ) ಮತ್ತು ಒಂದು ಆತ್ಮ ಕಥೆಯನ್ನೂ(ಭಿತ್ತಿ) ಬರೆದಿದ್ದಾರೆ. ಅವರ ೪ ಕಾದಂಬರಿಗಳು (ವಂಶವೃಕ್ಷ, ತಬ್ಬಲೀಯು ನೀನಾದೆ ಮಗನೇ, ಮತದಾನ ಮತ್ತು ನಾಯಿ-ನೆರಳು) ಚಲನಚಿತ್ರವಾಗಿವೆ ಮತ್ತು ಎರಡು ಕಾದಂಬರಿಗಳು ಧಾರಾವಾಹಿಗಳಾಗಿ ದೂರದರ್ಶನದಲ್ಲಿ ಬಂದಿವೆ (ದಾಟು ಮತ್ತು ಗೃಹಭಂಗ).

ಭೈರಪ್ಪನವರು ಪಂಪ ಸಾಹಿತ್ಯ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಆಕಾಡೆಮಿಯ ಹಲವು ಪ್ರಶಸ್ತಿ, ಕನ್ನಡ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಮತ್ತು ಏನ್-ಟಿ-ಆರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಅವರ ಹೆಚ್ಚಿನ ಕಾದಂಬರಿಗಳು ಕನ್ನಡದಲ್ಲಿ ಅತೀ ಹೆಚ್ಚು ಮಾರಾಟವಾದ ಮತ್ತು ದಾಖಲೆ ಮರು ಮುದ್ರಣ ಕಂಡ ಪುಸ್ತಕಗಳು. ಹಿಂದಿಯಲ್ಲೂ ಅವರ ಅನುವಾದಕೃತಿಗಳು ಅವರನ್ನು ಮೇಲ್ಮಟ್ಟದ ೫ ಲೇಖಕರಲ್ಲಿ ಸೇರಿಸಿದೆ.

ಕವಲು ಕಾದಂಬರಿ : (ಸಂಕ್ಷಿಪ್ತ ಕಥಾಹಂದರ)

ಕಾದ೦ಬರಿಯಲ್ಲಿ ಎರಡು ಸಮಾನಾಂತರದಲ್ಲಿನ ಕಥೆಗಳಿವೆ.
ಕಥೆ-೧: ಜಯಕುಮಾರ ಎ೦ಬ ಯಶಸ್ವೀ ಉಧ್ಯಮಿ ವಿಧುರ ತನ್ನ ಆಫಿಸ್ನಲ್ಲಿ ಕೆಲಸ ಮಾಡುವ ಮಂಗಳೇ ಎಂಬ ಕೆಲಸಗಾರ್ತಿಯೊಡನೆ ಲೈಂಗಿಕ ಸಂಪರ್ಕಕ್ಕೆ ಬಂದು, ಅವಳು ಗರ್ಭವತಿಯಾಗಿ, ಒತ್ತಾಯದಿಂದ ಅವಳನ್ನು ಮದುವೆ ಮಾಡಿಕೊಳ್ಳುತ್ತಾನೆ.

ಮಧ್ಯಮ ಕೆಲಸವರ್ಗದಲ್ಲಿ ತುಂಬಾ ಕಷ್ಟಪಟ್ಟು ಹೆಂಡತಿ ವೈಜಯ೦ತಿಯೋಡನೇ ಜಯಕುಮಾರ ಸ್ವಂತ ಉಧ್ಯಮ ಪ್ರಾರಂಬಿಸಿ ಅವಳ ಸಹಕಾರದಿಂದ ಹಂತ-ಹಂತವಾಗಿ ಬೆಳೆದು ಅತೀ ದೊಡ್ಡ ಸಂಸ್ಥೆಯೊಂದನ್ನು ಹುಟ್ಟುಹಾಕಿ ಸಂತೃಪ್ತ ಜೀವನ ನಡೆಸುತ್ತಿರುವಾಗ ರಸ್ತೆ ಅಫಘಾತವೊಂದರಲ್ಲಿ ಹೆ೦ಡತಿಯನ್ನು ಕಳೆದು ಕೊಂಡು, ಜೊತೆಗೆ ಪುಟ್ಟ ಮಗಳಿಗೆ ತೀವ್ರ ತಲೆಗಾಯಗಳಾಗಿ, ಆ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ.

ಮಂಗಳೇ ಆಧುನಿಕ ವಿಚಾರದ ಮಹಿಳೆಯಾಗಿದ್ದು ಕಾಲೇಜಿನಲ್ಲೇ ಪ್ರಭಾಕರ ಎಂಬ ಸಹಪಾಠಿಯೊಡನೆ ಪ್ರೇಮಿಸಿ ಲೈಂಗಿಕ ಸಂಪರ್ಕಕ್ಕೆ ಬಂದು ಗರ್ಬವತಿಯಾಗಿ ಮದುವೆಯಾಗದೆ ಗರ್ಭ ತೆಗೆಸಿದ್ದು, ಮುಂದೆ ಹಲವರು ಸ್ತ್ರೀ ಸಮಾನತೆ-ಇತ್ಯಾದಿ ಆಧುನಿಕ ಧೋರಣೆಗಳಿಂದ ಪ್ರಭಾವಿತಳಾಗಿ (ಇಳಾ ಮೇಡಂರ ಪ್ರಭಾವದಿಂದಾಗಿ), ಸ್ತ್ರೀ ಸ೦ಘಟನೆಗಳಲ್ಲಿ ತೊಡಗಿಸುತ್ತ ಜಯಕುಮಾರನ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುತ್ತಾಳೆ ಹಾಗೂ ಜಯಕುಮಾರನೊಡನೆ ಲೈಗಿ೦ಕ ಬಯಕೆಗೊಳಗಾಗಿ ಅವನನ್ನು ಅನೀವಾರ್ಯವಾಗಿ ಮದುವೆ ಮಾಡಿಕೊಳ್ಳುವಲ್ಲಿ ಶ್ರಮಪಟ್ಟು ಯಶಸ್ವೀಯು ಆಗುತ್ತಾಳೆ.

ಈ ನಡುವೆ ಮಂಗಳೆಗೆ ಗಂಡು ಮಗು ಆಗುತ್ತದೆ ಹಾಗು ಅವಳು ಹಳೆಯ ಪ್ರಭಾಕರನೊಡನೆ ನಿರಂತರ ಲೈಂಗಿಕ ಸಂಪರ್ಕದಲ್ಲೂ ಇರುತ್ತಾಳೆ. ಪರಸ್ಪರರ ಒತ್ತಾಯದಲ್ಲಿ ಮದುವೆಯಾದ ಮತ್ತು ವಿರುಧ್ಧ ವಿಚಾರದ ಅವರಲ್ಲಿ ದಾಂಪತ್ಯ ಸುಸೂತ್ರವಾಗಿರದೆ ಹದಗೆಡುತ್ತದೆ. ಈ ನಡುವೆ ಜಯಕುಮಾರಗೆ ವೇಶ್ಯಯರ ಸಂಗಕ್ಕೆ ಬಿದ್ದು ಪೋಲಿಸ ರೈಡ-ನಲ್ಲಿ ಸಿಕ್ಕು, ಸೆರೆಮನೆವಾಸವಾಗಿ, ಆಡಳಿತ ಕುಸಿದು ಅವನ ಸ೦ಸ್ಥೆಯೂ ವಿಷಮ ಸ್ಥಿತಿಗೆ ತಲುಪಿ, ಅವುಗಳಿಂದ ಹೊರ ಬರಲು ಅವನು ಸ೦ಸ್ಥೆ ಮಾರಿ ಹೆಂಡತಿಗೆ ವಿಚ್ಚೇದನ ನೀಡಿ ಪರಿಹಾರಾರ್ಥವಾಗಿ ಮನೆ ಹಣ ಕೊಟ್ಟು ಕೋಟಲೆಗಳಿಂದ ಹೊರಬರುತ್ತಾನೆ.

ಈ ನಡುವೆ ಜಯಕುಮಾರನ ನಚಿಕೇತ ಎಂಬ ವಿದೇಶದಲ್ಲಿರುವ ಅಳಿಯನೊಬ್ಬ ಎರಡು ವಿಧೇಶಿ ಹೆಂಗಸರುಗಳಿಂದ ಮೋಸ ಹೋಗಿ ವಿಚ್ಚೇದನ ಪರಿಹಾರವಾಗಿ ದಂಡಿಯಾಗಿ ಹಣ ಕಟ್ಟುತ್ತಿದ್ದು, ಅದೆಲ್ಲವುಗಳಿಂದ ಹೇಗೋ ಬಿಡಿಸಿಕೊಂಡು ಭಾರತಕ್ಕೆ ಬಂದು, ಇಲ್ಲಿಯೇ ಕೆಲಸವನ್ನೂ ಸೇರಿ, ಸ್ವಲ್ಪ ಕಾಲಾನಂತರ ಮಾವನ ಮಾನಸಿಕ ಕುಂಠಿತ ಮಗಳನ್ನೂ ಮದುವೆಯಾಗಿ, ಮಗುವನ್ನ ಹೊಂದಿ, ಮಾವನ ಅಳಿದುಳಿದ ಸ್ವಲ್ಪ ಹಣದಲ್ಲಿ ಉಧ್ಯಮವೊಂದನ್ನು ಪ್ರಾರಂಭಿಸುತ್ತಾನೆ.

ಕಥೆ ೨: ಇಷಾ ಮೇಡಂ ತನ್ನ ಬಹುರಾಷ್ಟ್ರೀಯ ಕ೦ಪನಿಯ ಉದ್ಯೋಗಿ ಗಂಡನೊಡನೆ ತನ್ನ ಕೆಲಸ ಬಿಟ್ಟು ಅವನೊಡನೆ ಸಂಸಾರಕ್ಕೆ ತಿರುಗಲಾಗದೇ, ಬೆಂಗಳೂರಿನ ತನ್ನ ಕೆಲಸದಲ್ಲೇ ಮುಂದುವರಿಯುತ್ತಾಳೆ. ಅಧುನಿಕ ಧೋರಣೆಯ ಮತ್ತು ಯುರೋಪಿಯನ್ನರ ಆಚಾರಕ್ಕೆ ವಿಚಾರಕ್ಕೆ ಮಾರುಹೋಗಿರುವ ಈ ಪಾತ್ರ ಸ್ವಂತ ಸುಖಕ್ಕೆ ಏನು ಮಾಡಲು ತಯಾರಾಗಿರುತ್ತಾಳೆ. ಈ ನಡುವೆ ಅವಳು ಒಬ್ಬ ಮಧ್ಯಮ ವಯಸ್ಸಿನ ರಾಜಕಾರಣಿಯಲ್ಲಿ ಲೈಂಗಿಕ ಸಂಪರ್ಕ್ಕೆ ಒಳಗಾಗಿ ಅನುರಕ್ತಳಾಗಿ ಅವನ ಫಾರಂಮನೆಯಲ್ಲಿ ಹೋಗಿರುತ್ತಾಳೆ. ಈ ವಿಷಯ ರಾಜಕಾರಣಿ ಹೆಂಡತಿಗೆ ಗೊತ್ತಾಗಿ ಅವಳು ಇವಳೊಡನೆ ರಂಪ ಮಾಡುತ್ತಾಳೆ. ಈ ನಡುವೆ ಇವಳ ಗಂಡ ವಿನಯಚಂದ್ರ ರಾಜಕಾರಣಿಯೊಡನೆ ಇವಳ ಲೈಂಗಿಕ ಚಿತ್ರಗಳನ್ನೂ ತೆಗಿಸಿರುತ್ತಾನೆ. ಈ ಚಿತ್ರಗಳನ್ನೂ ಉಪಯೋಗಿಸಿ ರಾಜಕಾರಣಿ ಇವಳನ್ನು ಫಾರ್ಮ ಮನೆಯಿಂದ ಹೊರಹಾಕಿಸುತ್ತಾನೆ. ವಿನಯಚಂದ್ರ ಅವಳಿಂದ ವಿಚ್ಛೇದನೆ ಪಡೆಯುತ್ತಾನೆ.

ವಿನಯಚಂದ್ರನ ಮಗಳು ತಾಯಿ ಇಷಾಳ ಆಶ್ರಯ ಬಿಟ್ಟು ಹಾಸ್ಟೆಲ್-ಗೆ ಸೇರಿ ತನ್ನ ಅಣ್ಣನಿಗೆ (ದೊಡ್ಡಪ್ಪನ ಮಗ) "ವಿಚ್ಚೆದಿತಳ ಮಗಳಾದ ತನಗೆ ಸೂಕ್ತ ಗಂಡೊಂದನ್ನು ಹುಡುಕುವ ಕಷ್ಟಕರದ ಕೆಲಸ ಮಾಡು" ಎಂಬ ಈಮೇಲ್-ನೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಎರಡು ಸಮಾನಾ೦ತರ ಕಥೆಗಳಿಗೆ ನಂಟೆ೦ದರೆ -ಇಷಾ ಮೇಡಂ ಮಂಗಳೇ ಮತ್ತು ಪ್ರಭಾಕರರಿಗೆ ಗುರು, ಪ್ರಭಾಕರ ರಾಜಕಾರಣಿಯ ಆಪ್ತ ಹಿಂಬಾಲಕ ಮತ್ತು ಇಷಾಳನ್ನು ಫಾರಂ ಮನೆಯಿಂದ ತೆರವು ಗೊಳಿಸುವಲ್ಲಿ ಪಾತ್ರವಹಿಸುತ್ತಾನೆ.

ಇತರ ಉಪಕಥೆಗಳು ಮತ್ತು ಪೂರಕ ಪಾತ್ರಗಳು: ಈ ನಡುವೆ ಜಯಕುಮಾರನ ಹೆಂಡತಿಯ ಕಾಲದ ಕೆಲಸದಾಳು-ನಮ್ರತೆಯಲ್ಲಿ ಕೆಲಸ ಮಾಡಿ ತಾಯಿಯಿಲ್ಲದ ಅವನ ಮತಿಕುಂಠಿತ ಮಗಳು ಪುಟ್ಟಕ್ಕಳನ್ನು ಮಗಳಂತೆ ಸಾಕಿ ಬೆಳೆಸಿ ದೊಡ್ದವಳನ್ನಾಗಿ ಮಾಡುವ ದ್ಯಾವಕ್ಕ, ಅವನ ಅತ್ತಿಗೆಯ ವರದಕ್ಷಿಣೆ ಕಿರುಕುಳದ ಸುಳ್ಳು ವಿಚಾರದಡೀ ಜೈಲಿಗೋಗಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಯಾರಿಗೂ ಕಾಣದೆ ಇದ್ದು ಆಮೇಲೆ ಬಂದು ಜಯಕುಮಾರನನ್ನು ಸೇರುವ ಅವನ ತಾಯಿ, ಅವನ ಮುಗ್ದ ಅಣ್ಣ- ಜೋರಿನ ಅತ್ತಿಗೆ, ವರದಕ್ಷಿಣೆ ವಿಚಾರದಲ್ಲಿ ಅತ್ಮಹತ್ಯೆ ಮಾಡಿಕೊಳ್ಳುವ ಅವನ ಅಣ್ಣ -ಅತ್ತಿಗೆಯ ಮಗಳು(ತಾಯಿ ವರದಕ್ಷಿಣೆ ಕೊಡುವ ವಾಗ್ದಾನ ಮಾಡಿ ಆಮೇಲೆ ತಿರುಗಿರುತ್ತಾಳೆ), ಅವನ ಅಕ್ಕ-ಭಾವ (ನಚಿಕೇತನ ತಂದೆ ತಾಯಿ) ಮತ್ತು ಅವನ ಮಿತ್ರ ಶೇಖರ ಪಾತ್ರಗಳು ಪೂರಕವಾಗಿ ಕಾದಂಬರಿಯಲ್ಲಿ ಬರುತ್ತವೆ. ಜೊತೆಗೆ ಮಂಗಳೆಯ ತಾಯಿ, ಅಣ್ಣ-ಅತ್ತಿಗೆ, ಮಂಗಳೆಯ ತಂದೆ, ಮಂಗಲೆಯ ಗೆಳತಿಯರು, ಸಲಿಂಗಿ ಸರಾಫ್ಮೇಡಂ, ಲಾಯರುಗಳು, ಮಹಿಳಾವಾದಿ ಪಾತ್ರಗಳು ಬರುತ್ತವೆ.

ಆ ಕಡೆ ಇಷಾ-ಮತ್ತು ವಿನಯಚಂದ್ರರ ಕಥೆಗೆ ಪೂರಕವಾಗಿ, ವಿನಯಚಂದ್ರನ ಅಣ್ಣ -ಅತ್ತಿಗೆ ಮತ್ತು ಅವರ ಮಗ (ವಿನಯಚಂದ್ರನ ಮಗಳೊಡನೆ ಪ್ರೀತಿಯ ಒಡನಾಡಿ ಅಣ್ಣ), ರಾಜಕಾರಣಿ, ಅವನ ಹೆಂಡತಿ, ಹೆಣ್ಣು ಲಾಯರುಗಳು ಬರುತ್ತಾರೆ.

ಇದು ಮುಖ್ಯ ಕಥಾಹಂದರ. ಆದರೆ ಕಾದಂಬರಿಯ ಹರವನ್ನು ಅನುಭೂತಿ ಹೊಂದಬೇಕಾದರೆ ಪ್ರತಿಯೊಂದು ಸಾಲುಗಳು ಓದುಗನಿಗೆ ಅವಶ್ಯ.

ಕಥಾ ತಂತ್ರ : ಕಥೆಯ ಅಧ್ಯಾಯಗಳು ಮುಖ್ಯ ಪಾತ್ರಗಳ ಸ್ವಗತದೊಂದಿಗೆ ವಿವರವಾಗಿವೆ. ಒಮ್ಮೆ ಜಯಕುಮಾರ, ಒಮ್ಮೆ ಮಂಗಳೆ, ಒಮ್ಮೆ ಇಷಾ ಹಾಗೂ ಒಮ್ಮೆ ವಿನಯಚಂದ್ರ ಹೀಗೆ ಸರತಿಯ ಮೇಲೆ ಸ್ವಗತದಲ್ಲಿ ಕಥೆಯನ್ನು ಹೆಣೆಯುತ್ತಾರೆ. ಈ ನಡುವೆ ನಚಿಕೇತ-ರಾಜಕಾರಣಿ-ಪ್ರಭಾಕರ-ವಿನಯಕುಮಾರನಾ ತಾಯಿ ಹಲವಾರು ಸಂಧರ್ಭದಲ್ಲಿ ಮಾತಿನಲ್ಲಿ ತಮ್ಮ ಉಪಕಥೆಗಳನ್ನು ತೋಡಿಕೊಳ್ಳುತ್ತಾರೆ. ಕಾದ೦ಬರಿಯಲ್ಲಿ ಎಲ್ಲೂ ತಟಸ್ಥ ವಿವರಣೆ ಅಥವಾ ಲೇಖಕನ ನಿರೂಪಣೆಯಲ್ಲಿ ಬರಲಾರದ್ದು ಓದುಗರು ಗಮನಿಸಬೇಕಾದ ಮುಖ್ಯ ಅ೦ಶ. ಕೆಲವು ಅಧ್ಯಾಯಗಳು ಮಂಗಳೆ ಮತ್ತು ಜಯಕುಮಾರರ ಕಥೆಗಾದರೆ ಮತ್ತೆ ಕೆಲವು ಅಧ್ಯಾಯಗಳು ಇಷಾ-ವಿನಯಚಂದ್ರರ ಕಥೆಗಿದ್ದೂ ಒಂದರ ನಂತರ ಒಂದು ಬಂದಿವೆ. ಒಬ್ಬರೊಬ್ಬರ ಸ್ವಗತಗಳು ಉಪ-ಅಧ್ಯಾಯಗಳಾಗಿವೆ. ಸ್ವಗತಗಳ ಮುಖಾ೦ತರವೇ ಕಾದ೦ಬರಿಯ ಕಥೆಗಳು ಹರಿದಿವೆ, ಜೊತೆಗೆ ಕಥೆಯ ಮೇಲೆ ಆಯಾ ಪಾತ್ರಗಳ ದೃಷ್ಟಿಕೋನ ಅವರಿಂದಲೇ ಹೇಳಿಸಲ್ಪಟ್ಟಿದೆ. ಹೀಗಾಗಿ ಕಾದ೦ಬರಿಕಾರ ಕಾದ೦ಬರಿಯಲ್ಲಿ ಕಾಣುವದೇ ಇಲ್ಲ. ಪಾತ್ರಗಳೇ ಕಥೆ ಹೇಳುತ್ತವೆ ಮತ್ತು ಪರಸ್ಪರ ವಿಮರ್ಶಿಸಿಕೊಳ್ಳುತ್ತವೆ.

ಕಥೆಯ ಆಶಯ:
ಈ ಎರಡು ಸಮಾನಾಂತರ ಕಥೆಗಳ ಸಮ್ಮಿಲನದ "ಕವಲು" ಕಾದಂಬರಿಯಲ್ಲಿನ ಆಶಯಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.
  • ಭಾರತೀಯ ಕೌಟುಂಬಿಕ ಮೌಲ್ಯಗಳು ಮತ್ತು ಪಾಶ್ಚ್ಯಾತ್ಯ ಕೌಟುಂಬಿಕ ಮೌಲ್ಯಗಳು ಮತ್ತು ಅವೆರಡರ ತುಲನೆ.
  • ಸ್ತ್ರೀ ಚಳುವಳಿಗಳು ಮತ್ತು ಸ್ತ್ರೀ ಪರ ಕಾನೂನುಗಳು -ಅದರ ವ್ಯಾಪ್ತಿ, ಉದ್ಧೇಶ, ಉಪಯೋಗ ಮತ್ತು ದುರುಪಯೋಗ. ಪಾಶ್ಚ್ಯಾತ್ಯ ಎರವಲು ಕಾನೂನುಗಳು ಭಾರತೀಯ ಕುಟುಂಬಕ್ಕೆ ಎಷ್ಟರಮಟ್ಟಿಗೆ ಪ್ರಸ್ತುತ -ಎಂಬುದರ ಮೀಮಾ೦ಷೆ.
  • ಮುಕ್ತ ಲೈಂಗಿಕತೆ ಅದರ ಪ್ರಸ್ತುತತೆ. ವಿಚ್ಛೇದನಾ ಕಾನೂನುಗಳಲ್ಲಿ ಗಂಡ-ಹೆಂಡತಿಯ ಸಂಭಂಧ ಮತ್ತು ಅವರ ಮಕ್ಕಳು ನೋಡುತ್ತದೆ ಹೊರತು ತಂದೆ ತಾಯಿ ಮತ್ತು ಇತರೆ ಅವಲಂಬಿತ ಕುಟುಂಬದ ಸ೦ಭ೦ಧಗಳ ಪರಿಗಣನೆಗೆ ತೆಗೆದು ಕೊಳ್ಳದ್ದು. ಅದಲ್ಲದೆ ಸ್ತ್ರೀ ಪರ ವರದಕ್ಷಿಣೆ, ವಿಚ್ಚೇದಿತ ಕಾನೂನುಗಳು ಹೇಗೆ ದುರುಪಯೋಗಪಡಲ್ಪಡುತ್ತವೆ.
  • ಪಾಶ್ಚ್ಯತೀಕಣ ಮೌಲ್ಯದ ಮೋಹದಲ್ಲಿ ಆಕರ್ಷಿತಗೊಳ್ಳುವ ಭಾರತೀಯ ಮನಗಳು ಸಮಗ್ರವಾಗಿ ತಮ್ಮನ್ನು ತಾವೂ ಅತ್ತವೂ ತೊಡಗಿಸದೆ, ಇತ್ತಲೂ ತೊಡಗಿಸದೆ ತೊಳಲಾಡುವ ಮತ್ತು ಸಂಭಂಧಗಳನ್ನು ತೊಳಲಾಡಿಸುವ ಪರಿ.
  • ಲೈಂಗಿಕ ಹಸಿವೆಗೆ ವೇಶ್ಯಾ/ವಿಟವೃತ್ತಿ ಅನಿವಾರ್ಯವೇ? ಸಲಿಂಗಕಾಮ ಸಹ್ಯವೇ?
  • ಜಾಗತೀಕರಣದ ವ್ಯವಹಾರಗಳಿಂದ, ಉಧ್ಯೋಗದಲ್ಲಿನ ಮಹದಾಶೆಗಳಿಂದ, ಹೆಚ್ಚು ಸಂಪಾದಿಸುವ ಹುಚ್ಚಿನಲ್ಲಿ, ಸಂಭಂಧಗಳು ಪೊಳ್ಳುಗೊಳ್ಳುತ್ತಿರುವ ಸ೦ಧರ್ಭ ಮತ್ತು ಮತ್ತು ಭಾರತೀಯ ಕುಟುಂಬದ ಮೌಲ್ಯಗಳು ಈ ನಿಟ್ಟಿನಲ್ಲಿ ಸಡಿಲವಾಗುತ್ತಿರುವ ಚಿತ್ರಣ.
ಕಾದ೦ಬರಿಯಲ್ಲಿನ ಬಾರತೀಯ ಕುಟುಂಬ ಮೌಲ್ಯಗಳ ಮಂಥನಗಳು:
  • ಸಂಕಲ್ಪ(commitment)ದಿಂದ ಪ್ರಾರಂಭವಾಗಿ, ಮನಗಳು ಪ್ರಾರಂಬದಲ್ಲಿ ತೊಡಗದೇ ಇದ್ದರೂ, ಕ್ರಮೇಣ ದೈಹಿಕ-ಮಾನಸಿಕ ಆಯಾಮಗಳಲ್ಲಿ, ಕುಟುಂಬದ ಇತರೇ ಹಿರೀ-ಕಿರಿ ಸಂಭಂಧಗಳ ಮಾರ್ಗದರ್ಶನ ಮತ್ತು ಪ್ರೀತಿಯಲ್ಲಿ ಒಂದಾಗಿ, ಪರಸ್ಪರರಲ್ಲಿ ಅನುರಕ್ತರಾಗಿ, ಗಟ್ಟಿಗೊಳ್ಳುವ ವೈವಾಹಿಕ ಸಂಭಂಧಗಳು. ಇದಕ್ಕೆ ಉದಾಹರಣೆ -ಮನಸ್ಸಿಲ್ಲದಿದ್ದರೂ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತಳಾದ ಪುಟ್ಟಕ್ಕನನ್ನು ಮದುವೆಯಾಗುವ ನಚಿಕೇತ ಕ್ರಮೇಣ ದಾಂಪತ್ಯದಲ್ಲಿ ಸಾಮರಸ್ಯ ಸಾಧಿಸಿ ಯಶಸ್ವೀಯಾಗುವದು, ಅಕ್ಕ-ಭಾವರ ಮಾರ್ಗದರ್ಶನದಲ್ಲಿ ವೈಜಯಂತಿಯನ್ನೂ ಮದುವೆಯಾಗಿ ಜಯಕುಮಾರ ದಾಂಪತ್ಯದಲ್ಲಿ ಯಶಸ್ವೀಯಾಗುವದು.
  • ಭಾರತೀಯ ನಾರಿ ತ್ಯಾಗ ಆದರ್ಶಗಳಲ್ಲಿ ಮನೆಯನ್ನು ನಡೆಸಿ, ಸಂಭಂಧಗಳನ್ನು ಗಟ್ಟಿಗೊಳಿಸುವದು - ಕುಡುಕ ಗಂಡನಿದ್ದರೂ ಅವನ್ನನ್ನು ಪ್ರೇಮದಿ೦ದ ಕಂಡು ದುಡ್ಡು ಕೊಟ್ಟು ತನ್ನ ಮುತ್ತೈದೆ ಭಾಗ್ಯ ಉಳಿದರೆ ಸಾಕೆಂದು ಪರೋಪಕಾರದಲ್ಲಿ (ಜಯಕುಮಾರ ಕುಟುಂಬಕ್ಕಾಗಿ , ಪುಟ್ಟಕ್ಕಳನ್ನು ಬೆಳೆಸುವಲ್ಲಿ) ಬದುಕನ್ನು ದೂಡುವ ದ್ಯಾವಕ್ಕ, ಸೊಸೆ ಸುಳ್ಳು ಆರೋಪ ನೀಡಿ ಜೈಲಿಗೆ ಹಾಕಿಸಿದರೂ ಸೊಸೆಯ ಮಗಳು ಆತ್ಮಹತ್ಯೆ ಮಾಡಿಕೊಂಡಾಗ ಅವಳನ್ನು ಕಾಣಲು ಹೋಗುವ- ವ್ಯೆಶ್ಯೆಯರ ಸಂಗ ಮಾಡಿ ಸಾಮಾಜಿಕವಾಗಿ ಹಾಗೂ ಔಧ್ಯೋಗಿಕವಾಗಿ ಹಾಳಾದ ಮಗನನ್ನು ಕ್ಷಮಿಸಿ ಅವನ ಬಾಳು ಹಸನು ಮಾಡಲು ಪ್ರಯತ್ನಿಸುವ ಜಯಕುಮಾರನ ತಾಯಿ, ಮನೆಕೆಲಸ ಒಪ್ಪ ಓರಣವಾಗಿ ಹಿರಿಕಿರಿಯರನ್ನು ಗೌರವಿಸುವ ವಿನಯಚಂದ್ರನ ಅತ್ತಿಗೆ, ಗಂಡನ ಕಚ್ಚೆಹರುಕತನ ಗೊತ್ತಿದ್ದರೂ ಅದನ್ನು ತಡೆಗಟ್ಟಲು ಗಂಡನೊಡನೆ ಹೋರಾಡದೆ ಅವನೊಡನೆ ಸಂಪರ್ಕದಲ್ಲಿರುವ ಹೆನ್ನುಗಲೊಡನೆ ಹೋರಾಡುವ ರಾಜಕಾರಣಿಯ ಪತ್ನಿ, ಇವುಗಳಿಗೆ ಉದಾಹರಣೆಯಾಗುವರು. ಈ ನಡುವೆ ಓದಿದ ವೈಜಯಂತಿ ಒಪ್ಪ ಓರಣವಾಗಿ ಮನೆಯನ್ನೂ ನಡೆಸಿ, ಮಗಳನ್ನೂ ಉತ್ತಮವಾಗಿ ಬೆಳಸಿ ಜೊತೆಗೆ ಆಫೀಸನಲ್ಲಿ ದುಡಿದು ಗಂಡನ ಯಶಸ್ಸಿಗೆ ಕಾರಣವಾಗಿರುತ್ತಾ ಆದರ್ಶ ಭಾರತೀಯ ಮಜಲಿನ ಪರಾಕಾಷ್ಠೆಯನ್ನೂ ಕಾದಂಬರಿಯಲ್ಲಿ ಕಾಣಬಹುದು.
  • ಲೈಗಿಂಕ ಸಂಭಂಧಗಳು ಯಶಸ್ವೀಯಾಗಲು ಮನ ಒಂದಾಗಿರಬೇಕು ಅದಕ್ಕೆ ಪರಸ್ಪರರಲ್ಲಿ ಗೌರವ ಪ್ರೀತಿ ಭಾವಗಳಿರಬೇಕು - ಮಂಗಳೆಯೊಡನೆ ಒತ್ತಾಯದಲ್ಲಿ ಮದುವೆಯಾದ ಜಯಕುಮಾರ ಅವಳೊಡನೆ ದೈಹಿಕ ಸಂಪರ್ಕದಲ್ಲಿ ವಿಫಲನಾಗುವದು, ಪುಟ್ಟಕ್ಕನಂತ ಮಾನಸಿಕ ಬೆಳವಣಿಗೆಯಾಗದ ಹೆಣ್ಣೋಡನೆ ಪ್ರೀತಿಯಿಂದ ಬೆರೆವ ನಚಿಕೇತ ಮಗುವನ್ನ ಪಡೆಯುವದು.
  • ಕುಟುಂಬದ ವ್ಯವಸ್ಥೆಯ ಎಲ್ಲ ಸಂಭಂಧಗಳ ಬೆಳವಣಿಗೆಗೆ ಆರ್ಥಿಕವಾಗಿ ಸಬಲರಿರುವವರು ನಿಲ್ಲುವದು- ಅತ್ತಿಗೆಯರ ಕಷ್ಟಕ್ಕೆ ಒದಗುವ ವಿನಯಚಂದ್ರ, ತಮ್ಮ ಜಯಕುಮಾರನ ಓದು ಮತ್ತು ಬೆಳವಣಿಗೆಗೆ ಕಾರಣಳಾಗುವ ಶೋಭಕ್ಕ ಮತ್ತು ಅವಳ ಗಂಡ, ಅಳಿಯ ನಚಿಕೇತನನ್ನು ಬೆಳೆಸುವ ಜಯಕುಮಾರ್-ವೈಜಯಂತಿ, ಮಾವನನ್ನು ಸ್ವಲ್ಪ ಕಾಲ ಸಾಕುವ ನಚಿಕೇತ, ತಾಯಿಯನ್ನು ಸಲಹುವ ಮಂಗಳೆ, ಜಯಕುಮಾರನ ಕಷ್ಟದಲ್ಲಿ ತಾನು ಕೂಡಿಟ್ಟ ಹಣ ವಿನಿಯೋಗಿಸುವ ಅವನ ತಾಯಿ ಹೀಗೆ ಹತ್ತು ಹಲವಾರು ಉದಾಹರಣೆ ನಿಲ್ಲುತ್ತವೆ.
  • ಭಾರತೀಯ ಉಡುಗೆ-ತೊಡುಗೆ-ಅಲಂಕಾರ ಮಹತ್ವ -ಕುಂಕುಮ ಬಳೆ ಸೀರೆ ಬಳಸಿದರೆ ಲಕ್ಷಣವಾಗಿದ್ದು ಮನೆ-ಮನ ಪ್ರಫುಲ್ಲವಾಗಿರುವದು ಎಂಬುದನ್ನು ವೈಜಯಂತಿ, ವಿನಚಂದ್ರನ ಅಣ್ಣನ ಹೆಂಡತಿ, ಪುಟ್ಟಕ್ಕಳ ಮುಖಾಂತರ ಹೇಳಿದೆ. ಹಾಗು ಇಲ್ಲದಿದ್ದರೆ ಸರಿಯಿರುವದಿಲ್ಲ ಎಂಬುದನ್ನು ಮಂಗಳೆ ಮತ್ತು ಇಶಾರ ಮುಖಾಂತರ ಕೆಲವು ಪಾತ್ರಗಳು ಹೇಳಿವೆ (ಮಂಗಳೆ ಪ್ರಭಾಕರನಿಗೆ ರುಚಿ ಇದ್ದರೆ ಅರುಚಿ ಹಾಗೂ ಇಷಾ ರಾಜಕಾರಣಿಗೆ ರುಚಿ ಇದ್ದರೆ ವಿನಯಚಂದ್ರಗೆ ಅರುಚಿ).
  • ಈ ನಡುವೆ ಭಾರತೀಯ ಕಂದಾಚಾರಗಳು ಎತ್ತಿ ತೋರಿಸಲ್ಫಟ್ಟಿವೆ- ಕುಟುಂಬಕ್ಕೆ ಗಂಡು ಬೇಕೆನ್ನುವ ಜಯಕುಮಾರನನ್ನು ವೈಜಯಂತಿ ಪುಟ್ಟಕ್ಕ ಏಕೆ ಆ ಸ್ಥಾನಕ್ಕೆ ಅರ್ಹಳಲ್ಲ ಎಂದು ವಾದಿಸಿ ಅವನ್ನನ್ನು ಒಪ್ಪಿಸುವದು, ಹೆಣ್ಣು ಮನೆಗೆ ಸೀಮತವಾಗಿರದೆ ವ್ಯವಹಾರಗಳಲ್ಲೂ ತೊಡಗಿಸಿಕೊಳ್ಳುವದು -ವೈಜಯಂತಿ ಉದಾಹರಣೆ ಮುಖಾಂತರ ತೋರಿಸಿ ಭಾರತೀಯ ಮನಗಳಲ್ಲಾಗಬೇಕಾಗಿರುವ ಬದಲಾವಣೆಗಳನ್ನ ಹೇಳಲಾಗಿದೆ.
  • ಲೈಂಗಿಕ ಸ್ವಾತಂತ್ರ ಮುಕ್ತತೆಯಿಂದ ಭಾರತೀಯ ಗಂಡುಗಳು ಅನುಭವಿಸಬೇಕಾದ ಪಾಡು ಗಳನ್ನ -ಇಷಾಳ ಸಂಪರ್ಕಕ್ಕೆ ಬಂದ ರಾಜಕಾರಣಿ ಪಾತ್ರ, ಮಂಗಳೆ ಸಂಪರ್ಕಕ್ಕೆ ಮತ್ತು ವೆಶ್ಯಯರ ಸಂಪರ್ಕಕ್ಕೆ ಬರುವ ಜಯಕುಮಾರಣ ಮುಖಾಂತರ ವಿವರಿಸಲ್ಪಟ್ಟಿದೆ.
  • ಲೈಂಗಿಕ ಮುಕ್ತತೆಯಿಂದ ಹೆಣ್ಣು ಭಾರತೀಯ ಮನಗಳ ನಡುವೆ ಪಡುವ ಪಾಡನ್ನು ಮಂಗಳೆ ಮತ್ತು ಇಶಾರ ಮಲಕ ಹೇಳಲ್ಪಟ್ಟಿದೆ.
  • ಹೆಂಡತಿ ಸಮಭಾಗಿಯಾಗಿ ದುಡಿದರೂ ಅವಳನ್ನುಳಿಗೆ ಸಂಸ್ಥೆಯಲ್ಲಿ ಪಾಲುದಾರಳನ್ನಾಗಿ ಮಾಡದೆ ಹೋದದ್ದಕ್ಕೆ ಆಗುವ ಪರಿಣಾಮಗಳು. (ಜಯಕುಮಾರನ ಸಂಸ್ಥೆಯನ್ನೂ ಕಟ್ಟಿ ಬೆಳಸುವದರಲ್ಲಿ ಹೆಚ್ಸಿನಪತ್ರ ವಹಿಸಿದ್ದ ವೈಜಯಂತಿಗೆ ಅದರಲ್ಲಿ ಪಾಲೇ ಇರುವದಿಲ್ಲ.
  • ಈ ನಡುವೆ ಜಯಕುಮಾರನ ಮಿತ್ರ ಶೇಖರ್ - ಒಬ್ಬರಿಗೊಬ್ಬರು ಹೇಗೆ ಸಹಾಯವಾಗುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ. ಅವರು ಅವನನ್ನು ಎರಡು ಸಲ ಜೈಲಿಂದ ಬಿಡಿಸುವಲ್ಲಿ ಮತ್ತು ಉಧ್ಯಮವನ್ನ ಮರುಸ್ಥಾಪನೆ ಮಾಡಿಸುವಲ್ಲಿ ನೆರವಾಗುತ್ತಾರೆ. ಒಂದು ಕಡೆ ಅವನ್ ವೇಶ್ಯಾಸಂಗಕ್ಕೆ ಅವರು ಕಾರಣರಾಗಿರುತ್ತಾರೆ.
ಕಾದ೦ಬರಿಯಲ್ಲಿನ ಭಾರತೀಯ ಮನಗಳಲ್ಲಿ ಪಾಶ್ಚಾತ್ಯ ಕುಟುಂಬ ಮೌಲ್ಯಗಳ ಮಂಥನಗಳು:
  • ಪರಸ್ಪರ ಆಕರ್ಷಣೆಯಿಂದ "ಒಟ್ಟಿಗಿರುವದರಿಂದ (living together) ಪ್ರಾರಂಭವಾಗುವ ಸಂಭಂಧಗಳು ಭಾರತೀಯ ಮನದಲ್ಲಿ ಊರ್ಜಿತವಾಗದೆ ಇರುವದು- ನಚಿಕೇತ ಒಟ್ಟಿಗಿರುವದರಿಂದ ಪ್ರಾರಂಭಿಸಿದ ಸ೦ಭಂಧ ಊರ್ಜಿತವಾಗದೆ ಇದ್ದಾಗ ಅದನ್ನು ಪಾಶ್ಚ್ಯಾತ್ಯರಂತೆ ಸಾಮಾನ್ಯವಾಗಿ ತೆಗೆದುಕೊಳ್ಳದೆ ಕೊರಗುವದು, ಪ್ರಭಾಕರನೊಡನೆ ಲೈಗಿಂಕ ಸಂಪರ್ಕಕ್ಕೆ ಬರುವ ಪಾಶ್ಚ್ಯತ್ಯ ಮತ್ತು ಅಧುನಿಕ ಧೋರಣೆಯಲ್ಲಿ ಮುಂದುವರೆಯುವ ಮಂಗಳೆ ಗರ್ಭವತಿಯದಾಗ ಗರ್ಭವನ್ನು ತೆಗೆಸಲು ಅವಳಲ್ಲಿನ ಭಾರತೀಯ ಮನ ಅಡ್ಡ ಬರುವದು, ಗಂಡನೊಡನೆ ಹೋಗದೆ ಅವನನ್ನು ಬಿಟ್ಟಿರದೆ ತೊಳಲಾಡುವ ಇಷಾಳು, ಕಾನೂನು ಮೊರೆ ಹೊಕ್ಕು ವಿಚ್ಛೇದನೆ ತೆಗೆದುಕೊಂಡರೂ ಮನದ ಕೊರಗಲ್ಲಿ ಉಳಿವ ಮಂಗಳೆ ಹೀಗೆ ಹಲವಾರು ಸಂಧರ್ಭಗಳಲ್ಲಿ ಉದಾಹರಣೆ ದೊರೆಯುತ್ತದೆ.
  • ಸ್ತ್ರೀ ಸಮಾನತೆಯ ಹೆಸರಲ್ಲಿ ಮುಕ್ತ ಲೈಂಗಿಕತೆಗೆ ಆಕರ್ಷಿತರಾಗಿ ಅದನ್ನು ಅನುಭವಿಸಿ ಅದರ ಪರಿಣಾಮ ಮತ್ತು ಅನುಭವಗಳನ್ನೂ ಸಹಜ ಎಂದು ಪರಿಗಣಿಸದೆ ತೊಳಲಾಡುವ ಪಾತ್ರಗಳು.
ಕಾದಂಬರಿಯಲ್ಲಿನ ಕುಟುಂಬ ಕಾನೂನು ಮಂಥನ:
  • ಸಣ್ಣ ಕಾರಣಕ್ಕೆ ಅತ್ತೆ ಸೊಸೆ ಜಗಳಾಡಿ, ಸೊಸೆ ವರದಕ್ಷಿಣೆ ಕಾನೂನಡೀ ಅತ್ತೆಯನ್ನು ಜೈಲಿಗೆ ಕಳಿಸುವದು ಮತ್ತು ಆಮೇಲೆ ಆ ಕೇಸನ್ನು ಹಿಂತೆಗೆಯಲಾಗದೇ ಅವಳಿಗೆ ಶಿಕ್ಷೆ ಆಗುವದು. (ಜಯಕುಮಾರ ಅತ್ತಿಗೆ ಮತ್ತು ತಾಯಿ ನಡುವೆ)
  • ಗಂಡ -ಹೆಂಡತಿ ಜಗಳದಲ್ಲಿ ಹೆಂಡತಿಗೆ ಕೈ ಎತ್ತಿದ ಪ್ರಸಂಗದಲ್ಲಿ ಹೆಂಡತಿ ದೂರು ನೀಡಿ ಅವನ್ನನ್ನು ಮಾನಸಿಕ ಕಿರುಕುಳದ ಅಡೀ ಜೈಲಿಗಟ್ಟುವದು. (ಮಂಗಳೆ-ಜಯಕುಮಾರ)
  • ಪರಿಹಾರ ಪಡೆಯುವ ಉದ್ಹ್ಧೆಶದಲ್ಲಿ ನಚಿಕೇತನನ್ನು ಮದುವೆಯಾಗಿ ಆಮೇಲೆ ವಿಚ್ಛೇದನೆ ಪಡೆದು ವಂಚಿಸುವ ವಿದೇಶೀ ಮಹಿಳೆ (ಅವಳು ಇದನ್ನು ಉದ್ಹ್ಯೋಗವನ್ನಾಗಿಸಿರುತ್ತಾಳೆ!)
  • ವೇಶ್ಯಾವಾಟಿಕೆಯಲ್ಲಿ ತೊಡಗುವದು ಅದರಿಂದ ಕಾನೂನು ಕ್ರಮಕ್ಕೊಳಗಾಗುವದು. ಜಯಕುಮಾರನ ತಾಯಿ ತಪ್ಪಲ್ಲ ಎನ್ನುವದರ ಮುಖಾಂತರ ವಿಧುರ ಮತ್ತು ಮನೆಯಲ್ಲಿ ಸುಖ ಸಿಗದ ಗಂಡು ವೇಶ್ಯೇಯಾರಲ್ಲಿ ಲೈಂಗಿಕ ದಾಹ ತೀರಿಸಿಕೊಳ್ಳುವದು ಸಹಜ ಎಂಬತಿದೆ. ಇತಿಹಾಸದಲ್ಲೂ ಇದು ಇತ್ತು ಇನ್ನು ಸಮರ್ಥನೆಯು ಇದೆ.
  • ವಿನಯಚಂದ್ರ ಚಾಣಾಕ್ಷವಾಗಿ ಒಲ್ಲದ ಹೆಂಡತಿಯಿಂದ(ಇಷಾ) ವಿಚ್ಛೇದನೆ ಪಡೆಯಲು ಅವಳನ್ನು ದೂರ ಮಾಡುವದು, ಲೈಂಗಿಕ ಹಸಿವಿನ್ನಲ್ಲಿಡುವದು, ಅವಳು ಬೇರೆಯವನೊಡನಿರುವಾಗ ಚಿತ್ರಗಳನ್ನೂ ತೆಗೆದು ಸುಲಭದಲ್ಲಿ ವಿಚ್ಛೇದನೆ ಪಡೆಯುವ ತಂತ್ರ.
  • ಕುಟುಂಬ ಕನುನುಗಳನ್ನು ಉಪಯೋಗಿಸಿ ಅದಲಿತವರ್ಗದವರು ಹಣ ಮಾಡುವ ತಂತ್ರವನ್ನು ಒಬ್ಬ ಮಹಿಳಾಪೋಲಿಸ್ ಅಧಿಕಾರಿ ಪಾತ್ರದಲ್ಲಿ ಹೇಳಲಾಗಿದೆ.
ವೈಭವ ವಿಲಾಸೀ ಜೀವನ ಕ್ರಮ : ಇಷಾ ಮತ್ತು ವಿನಯಚಂದ್ರರ ಕಥೆಯಲ್ಲಿ ಹೆಚ್ಚು ಸಂಪಾದಿಸಿ, ವೈಬ್ಹೊವೆಪೆತ ಜೀವನ ನಡೆಸುವ ಕುಟುಂಬದಲ್ಲಿನ ಸ೦ಭಂಧಗಳ ಕುಸಿತ ಜೊತೆಗೆ ಹೆಣ್ಣು ಸ್ವತಂತ್ರ ಮನೋಭಾವದಲ್ಲಿ ವರ್ತಿಸಿದಾಗ ಆಗುವ ಪರಿಣಾಮಗಳು ವಿಶದವಾಗಿವೆ. ಮಂಗಳೆಯ ಜೀವನ ಕ್ರಮ ಸಹಾ.

ನನ್ನ ವಿಚಾರ :
  • ಕಾದಂಬರಿಯ ಆಶಯ ಪ್ರಸ್ತುತ ಕಾಲಕ್ಕೆ ಔಚಿತ್ಯ ಪೂರ್ಣವಾಗಿದ್ದು ಕಾದಂಬರಿ ಈ ಹರವಿನಲ್ಲಿ ಸಾಕಷ್ಟು ಪರಿಶ್ರಮ ಹೊಂದಿದೆ. ಆದರೆ ಎಲ್ಲ ಸ್ವತಂತ್ರ ಮನೋಭಾವ ಹೊಂದಿದ ಸ್ತ್ರೀ ಪಾತ್ರಗಳು ನಕಾರಾತ್ಮಕವಾಗಿ ಆಡಿಸಲ್ಪಟ್ಟಿವೆ. ಈ ಕಾರಣಕ್ಕಾಗಿ ಸ್ತ್ರೀ ವಿರೋದ್ಧಿ ದೋರಣೆಯ ಕಾದಂಬರಿ ಎನ್ನುವ ಅಪಾಯ ತಪ್ಪಿಸಿಕೊಳ್ಳಲಾಗಿಲ್ಲ. ವೈಜಯಂತಿಯ ಪಾತ್ರ ಮಾತ್ರ ಅಪವಾದ. ಆದರೆ ಆ ಪಾತ್ರ ಕೇವಲ ಬೇರೆಯವರ ಸ್ವಗತದಲ್ಲಿ ಬರುವ ಪಾತ್ರವಾಗಿದ್ದರಿಂದ ಓದುಗರಿಗೆ ಅದರ ಕಡೆ ಗಮನ ಹರಿಯುವದಿಲ್ಲ.
  • ಒಟ್ಟಿನಲ್ಲಿ- ಸಂಕಲ್ಪವಿಲ್ಲದ ಆಕರ್ಷಣಾ ಪ್ರೇಮಗಳು ಹೆಚ್ಚು ಗಟ್ಟಿಯಾಗಲಾರವು, ಪ್ರೀತಿಯಲ್ಲಿ ಅಧಿಕಾರ ಚಲಾಯಿಸಿದರೆ ಅದು ಅಧಿಕಾರವಾಗಲಾರದು, ಅಧಿಕಾರಯುತವಾಗಿ ಪ್ರೀತಿ ಪಡೆಯಲೆತ್ನಿಸಿದರೆ ಅದು ಸಂಪೂರ್ಣ ವೇಧ್ಯವಾಗದು, ಮನಗಳು ತೊಡಗದೇ ಲೈಂಗಿಕ ಕ್ರಿಯೆಗಳು ಸಂತೃಪ್ತಿಯಲ್ಲಿ ಮುಗಿಯವು, ತ್ಯಾಗವಿಲ್ಲದೆ ಪ್ರೀತಿ ಅರಳದು, ಕುಟುಂಬವೆಂದರೆ ಬರಿ ಗಂಡ ಹೆಂಡತಿ ಮತ್ತು ಅವರ ಪ್ರಾಪ್ತರಲ್ಲದ ಮಕ್ಕಳು ಎಂಬ ಸೀಮಿತ ಅರ್ಥದ ಕಾನೂನಿನ ಔಚಿತ್ಯವಲ್ಲ, ಕುಟುಂಬ ಎಂದರೆ ಎಲ್ಲ ಸಂಭಂಧಗಳು ಸೇರಬೇಕು ಎಂಬ ನೀತಿಗಳು ಕಾದಂಬರಿಯಲ್ಲಿ ಸಿಗುತ್ತೆ.
  • ಎರಡು ಕಥೆಗಳು ಸೇರಿ ಹರವು ದೊಡ್ಡದಾಗಿ ಮತ್ತು ಹೇಳಬೇಕಾದ ಅ೦ಶಗಳು ಹೆಚ್ಚಾಗಿ ಯಾವದೂ ಪ್ರಭಾವಕಾರಿಯಾಗಿ ಹೇಳಲಾಗದೆ ಹೋಗಿದೆ. ಕೇವಲ ಒಂದು ಕಥೆ ತೆಗೆದುಕೊಂಡು ಯಾವದೇ ಒಂದು ವಿಚಾರದ ಸುತ್ತ ಮಂಥನ ನಡೆದಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿತು.
  • ಪ್ರಭಾಕರ ಮತ್ತು ರಾಜಕಾರಣಿ-ಯಂಥ ಪಾತ್ರಗಳು ಭಾರತೀಯ ಮೌಲ್ಯಗಳ ದುರುಪಯೋಗದಲ್ಲಿ ಹೆಣ್ಣನ್ನು ಉಪಯೋಗಿಸುವದಕ್ಕೆ ನಿಂತಿರುವಾಗ, ಬೇಕಾದ ಖಂಡನೆ ಕಾದಂಬರಿಯಲ್ಲಿ ಕಾಣಲಿಲ್ಲ.
  • ಜಯಕುಮಾರನು ಆಧುನಿಕ ಹೆಸರಲ್ಲಿ ತನ್ನ ವಿಧುರ ಜೀವನದಲ್ಲಿ ಮಜಾ ಪಡೆಯಲು ನೋಡುವದರಿಂದ ಮಂಗಳೆ ಮಾಡಿದ್ದು ಒಮ್ಮೆ ಸರಿಯೇನ್ನಿಸಬಹುದು.
  • ಸಂಕಲ್ಪದಲ್ಲಿ ಅರಳಿದ ಸಂಬಂಧಗಳಲ್ಲಿ ಪ್ರೀತಿ ತಾನೇ ಸುರಿದು ಅವು ಗಟ್ಟಿಯಾಗುತ್ತವೆ.
  • ಪುರುಷರ ತಪ್ಪುಗಳು ಸ್ವಾಭಾವಿಕ ( ವಿವಾಹೇತರ ಸಂಭಂಧಗಳು) ಎನ್ನುವಷ್ಟು ದಾರ್ಷ್ಟ್ಯವಾಗಿ ಮಹಿಳೆಯ ಸಂಭಂಧಗಳು ಸ್ವಾಭಾವಿಕ ಎನ್ನದ ಧೋರಣೆ ಮೆಚ್ಚುಗೆಯಾಗಲಿಲ್ಲ. ತಪ್ಪೆಂದರೆ ಇಬ್ಬರದೂ ತಪ್ಪೇ, ಅಲ್ಲವೆಂದರೆ ಇಬ್ಬರದೂ ತಪ್ಪಿಲ್ಲ.
  • ಪಾಶ್ಯಾತ್ಯ ಅನುಕರಣೆ ಮಾಡಿದರೂ ನಮ್ಮ ಭಾರತೀಯ ಮನಗಳು ಸಂಪೂರ್ಣ ಪರಿವರ್ತಿತವಾಗದು. ಈ ನಿಟ್ಟಿನಲ್ಲಿ ನಮ್ಮ ಸ೦ಸ್ಕ್ರತಿಗೆ ತಕ್ಕ ಹಾಗಿದ್ದು, ಪಾಶ್ಚಾತ್ಯ ಜ್ಞಾನವನ್ನು ಪಡೆದು ಉಧ್ಯೋಗ ಮತ್ತು ಆರ್ಥಿಕ ಕ್ಷೇತ್ರದಲ್ಲಿ ನಾವು ಪ್ರಗತಿ ಸಾಧಿಸಬಹುದು-ವೈಜಯಂತಿ ತರಹ.
  • ಜೀವನದ ಮಟ್ಟದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸ್ತರಗಳು ನಮ್ಮ ಮನೋಧರ್ಮವನ್ನು ಸಂಪೂರ್ಣ ಬದಲಾರಗಿಸಲಾರದ ಮಟ್ಟದಲ್ಲಿ ಆಳವಿರುವದರಿಂದ ಅದರಲ್ಲಿ ಪಾಶ್ಯಾತ್ಯ ಧೋರಣೆ ಅಳವಡಿಕೆ ಕಷ್ಟ. ಆದರೆ ಅದನ್ನು ನಾವು ವಿಧ್ಯೆ ಉಧ್ಯೋಗ ದಲ್ಲಿ ರೂಡಿಸಿಕೊಳ್ಳಬಹುದು.
  • ಕಾದಂಬರಿ ಹಸರು ಹೇಳುವ ಹಾಗೆ ನಮ್ಮ ಭಾರತೀಯ ಮನಗಳು ಇತ್ತ ಭಾರತೀಯ ಮೌಲ್ಯಗಳನ್ನು ಸಂಪೂರ್ಣ ಬಿಡದೇ, ಅತ್ತ ಪಾಶ್ಚ್ಯಾತ್ಯ ಮೌಲ್ಯಗಳನ್ನು ಸಂಪೂರ್ಣ ಅಪ್ಪಿಕೊಳ್ಳದೇ ತೊಳಲಾಡುತ್ತಾ"ಕವಲು" ದಾರಿಯಲ್ಲಿವೆ. ಯಾವಕಡೆ ಹೋಗಬೇಕು ಯಾವಕಡೆ ಇರಬೇಕು ಎಂಬುದರ ವಿಚಕ್ಷಣೆ ಬೇಕು. ಈ ನಿಟ್ಟಿನಲ್ಲಿ ಕವಲು ಓದುಗರ ಮನದಲ್ಲಿ ಸಾಕಷ್ಟು ತರಂಗಗಗಳನ್ನೆಬ್ಬಿಸುವದು.
  • ಆದರೆ ಎರಡು ಕಥೆಗಳನ್ನು- ಅದೊಂದು ಸ್ವಲ್ಪ ಇದೊಂದು ಸ್ವಲ್ಪ ಹೇಳುತ್ತಾ ಹೋಗುವದರಿಂದ ಓದುಗರಿಗೆ ಓದಿನ ಓಟ ಕಷ್ಟವೆನಿಸುತ್ತದೆ. ಜೊತೆಗೆ ಹಲವಾರು ವಿಷಯಗಳು-ಮೌಲ್ಯ, ಸಂಭಂಧಗಳು, ಕಾನೂನು, ಲೈಂಗಿಕತೆ, ಸ್ತ್ರೀ ಸಮಾನತೆ, ಆಧುನಿಕತೆ-ಸನಾತನತೆ, ಹೀಗೆ ಹಲವಾರು ವಿಷಯಗಳ ಸುತ್ತ ಹರಿಯುವದರಿಂದ ಓದುಗರಿಗೆ ಸ್ವಲ್ಪ ಕವಲಿನ ದಾರಿಯೇ ಎನಿಸುವದು.
  • ಎಲ್ಲ ಆಧುನಿಕ ಧೋರಣೆ ಮತ್ತು ಸ್ತ್ರೀ ಸಂಘಟನೆಗಳ ಮಹಿಳೆಯರು (ಕಾದಂಬರಿಯಲ್ಲಿ ಬರುವ) ನಕಾರಾತ್ಮಕ ಧೋರಣೆ ಇರುವದರಿಂದ ಜನ ಕಾದ೦ಬರಿ ಸ್ತ್ರೀ ಧೋರಣಾವಾದಿಗಳ ವಿರೋಧಿಯೆಂಬ ನಿಲುವಿಗೆ ಬರಬಹುದು.
ಒಟ್ಟಿನಲ್ಲಿ ಕಾದಂಬರಿ ಸಮಕಾಲೀನ ಪರಿಸ್ಥಿತಿಯಲ್ಲಿನ ಭಾರತೀಯ ಮನಗಳ ತಮ್ಮ ಪರಂಪರಾಗತ ಮೌಲ್ಯ ಮತ್ತು ಆಧುನಿಕ ಮೌಲ್ಯಗಳ ಮನ್ವಂತರದ ಕವಲಿನಲ್ಲಿ ನಿಂತು ದ್ವಂದ ಎದುರಿಸುವಲ್ಲಿನ ಕ್ಷಣಗಳನ್ನು, ಒಂದನ್ನೂ ಪೂರ್ತಿ ಬಿಡದ, ಒಂದನ್ನೂ ಪೂರ್ತಿ ಅಪ್ಪಿಕೊಳ್ಳದ ಸಂಧರ್ಭಗಳಲ್ಲಿ ಸಂಭಂಧಗಳು ಹಾಗೂ ಕುಟುಂಬ ವ್ಯವಸ್ಥೆ ಸಡಿಲಳವಾಗುತ್ತಿರುವ ಚಿತ್ರಣವನ್ನ ಮೂಡಿಸುವ ಪ್ರಯತ್ನವಾಗಿದೆ.
ಎರಡು ಕಥೆ ಮತ್ತು ಹಲವಾರು ವಿಷಯಗಳ ಸುತ್ತಲಿನ ಚಿಂತನ ಏಕ ಕಾದಂಬರಿಯಲ್ಲಿ ಮೂಡಿ ಯಾವದೇ ಒಂದು ವಿಷಯ ಸದೃಡ ಹರಳುಗಟ್ಟಲು ಆಗಿಲ್ಲ ಹಾಗೂ ಮಂಥನ ಓದುಗರನ್ನು ಕೆಣಕುವ ಮಟ್ಟಕ್ಕೆ ಹೋಗಿಲ್ಲ. ಈ ನಡುವೆ ಓದುಗರು ಕಾದಂಬರಿ ಅಭಿವ್ಯಕ್ತಿ ಗಳನ್ನು ಭೈರಪ್ಪನವರದ್ದಾಗಿಸಿ ಆ ವಿಷಯಗಳಿನ ತಮ್ಮ ಅಭಿಪ್ರಾಯ ಮೂಸೆಯಲ್ಲಿ ಅವರ ಪರ-ವಿರೋಧಿ ನಿಲುವಿಗೆ ನಿಲ್ಲುವದಾಗಲಿ ಅಥವಾ ಅವರ ಹಿಂದಿನ ಕಾದ೦ಬರಿಗಳಿಗೆ ಹೋಲಿಸಿ ಇದು ಉತ್ತಮ ಅಥವಾ ಕಳಪೆ ಎನ್ನುವ ವಿಮರ್ಶೆಗೆ ನಿಂತು ಕಾದಂಬರಿಯಲ್ಲಿನ ಆಶಯಗಳು ಸರಿಯಾದ ಮಂಥನವಿಲ್ಲದೆ ಸೊರಗುವ ಸಾಧ್ಯತೆ ಇಲ್ಲದೆ ಇಲ್ಲ!

(ಚಿತ್ರಗಳ ಕೃಪೆ : ಕನ್ನಡಿ ಅಂಗಡಿ ಅಂತರ್ಜಾಲ ತಾಣ ಮತ್ತು ಭೈರಪ್ಪನವರ ಅಂತರ್ಜಾಲ.
ಭೈರಪ್ಪನವರ ಬಗೆಗಿನ ಮಾಹಿತಿ ಕೃಪೆ : ವಿಕಿಪೀಡಿಯಾ ಅಂತರ್ಜಾಲ ತಾಣ)

Wednesday, March 31, 2010

ಮಿತ್ರ ವಾಮನನ "ತೆರೆಗಳು" ಕವನ ಸ೦ಕಲನದ ಪರಿಚಯ




ನನ್ನ ಆಪ್ತ ಮಿತ್ರ ವಾಮನನ "ತೆರೆಗಳು" ಕವನ ಸ೦ಕಲನ ಮೊನ್ನೆ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ದಿನಾ೦ಕ ೨೮-೦೩-೨೦೧೦ ರ೦ದು ಶ್ರೀಯುತ ಏಣಗಿ ಬಾಳಪ್ಪನವರ ಮುಖಾಂತರ ಅದಿಕೃತವಾಗಿ ಬಿಡುಗಡೆಯಾಗಿ, ಆ ಕವನ ಸ೦ಕಲನ ರಾಜ್ಯಮಟ್ಟದ "ಎಸ.ಡಿ. ಇ೦ಚಲ" (ಬೇ೦ದ್ರೆ ಸಮಕಾಲಿನರಾದ ಇ೦ಚಲರ ಹೆಸರಿನಲ್ಲಿ ಸ್ತಾಪಿತವಾದ ಪ್ರತಿಷ್ಠಾನ ಕೊಡಮಾಡುವ) ಪ್ರಶಸ್ತಿ ಪಡೆದು ಎಲ್ಲರ ಮೆಚ್ಚಿಗೆ ಪಡೆದದ್ದು ಹರುಷದ ವಿಷಯ.
ವಾಮನರ ಆ ಕವನ ಸ೦ಕಲನಕ್ಕೆ ನನ್ನ ಬೆನ್ನುಡಿ ಇತ್ತು. ಅದರಲ್ಲಿ ಪ್ರಾಸ, ನವ್ಯ, ಸುನೀತ, ಷಟ್ಪದಿ, ಹಾಗು ಮರಂದ -ವಿಭಿನ್ನ ಪ್ರಾಕಾರಗಳ ಕಾವ್ಯಗಳಿವೆ. ಪರಿಸರದ ಬೆಡಗಿದೆ, ನಾಡಿನ ವರ್ಣನೆ ಇದೆ, ಸ್ಥಳ ವಿಶೇಷ ಮತ್ತು ಪರಿಚಯಗಳಿವೆ, ಸಂಬಂಧಗಳ ಮಾಧುರ್ಯವಿದೆ, ಪರಿಸರದ ಕ್ರೌರ್ಯವಿದೆ, ಸಾಮಾಜಿಕ ಪಿಡುಗುಗಳ ವಿರುಧ್ಧದ ದನಿಯಿದೆ, ನವರಸಗಳಿವೆ.
ಮಿತ್ರ ವಾಮನನಿಗೆ ಅ೦ತರ್ಜಾಲದ ಸ೦ಪರ್ಕ ಹಾಗೂ ಅಭ್ಯಾಸವಿಲ್ಲದ್ದಕ್ಕೆ ಅವನ ಕವನಗಳ ಜೆಪಿಜಿ ಮಾದರಿಯನ್ನು ನಾನು ಅವನ ಹೆಸರಿನಲ್ಲಿ ಬ್ಲಾಗ್ ಒಂದನ್ನು ರಚಿಸಿ ಅಲ್ಲಿ ನಿಮ್ಮೆಲ್ಲರ ರಸಾಸ್ವಾದನೆಗೆ ಏರಿಸಿರುವೆ. ಓದಿ ಪ್ರತಿಕ್ರಿಯಿಸಿ.

ಅದರ ಕೊಂಡಿ : http://vamkulkarni.blogspot.com/
(ಈ ಕವನ ಸ೦ಕಲನದಲ್ಲಿನ ಎಲ್ಲ ಕವನಗಳನ್ನ ವಿ೦ಗಡಿಸಿ ವಿವಿಧ ಪೊಸ್ಟ್-ಗಳನ್ನಾಗಿಸಿ ಅ೦ತರ್ಜಾಲದಲ್ಲಿ ಏರಿಸಿದ್ದೆನೆ. ಮರ೦ದದ ಹನಿಗಳು ನನಗಿಷ್ಟವಾದ ಚೆ೦ದದ ಚುಟುಕು ಪ್ರಾಕಾರ. )

ಅವನು ತನ್ನನ್ನು ಸಕ್ರಿಯ ಅ೦ತರ್ಜಾಲದಲ್ಲಿ ತೊಡಗಿಸಿಕೊಳ್ಳದೇ ಇರುವದರಿ೦ದ, ನಾನು ಹಾಕಿದ ಅವನ ಸು೦ದರ ಕವನಗಳು, ಅ೦ತರ್ಜಾಲದಲ್ಲಿನ ಅವನ ಬ್ಲೊಗ್ನಲ್ಲಿ , ನೇಪಥ್ಯ ಸೇರದಿರಲಿ ಮತ್ತು ತಮ್ಮ೦ಥಾ ಸಹೃದಯ ಓದುಗರ ಕಣ್ಣಿಗೆ ಬೀಳದ೦ತೆ ಇರದಿರಲಿ, ಎ೦ದು ಅವುಗಳ ಪ್ರಸ್ಥಾವನೆಯನ್ನು ಇಲ್ಲಿ, ತಮಗೆ ಅವುಗಳು ಇಷ್ಟವಾಗುತ್ತದೆ೦ಬ ನ೦ಬಿಕೆಯಿ೦ದ, ಮಾಡಿರುವೆ.

ಆ ಕವನ ಸಂಕಲನದ ನನ್ನ ಬೆನ್ನುಡಿಯನ್ನು ಕವನ ಸಂಕಲನದ ಪರಿಚಯಕ್ಕೆ ಕೆಳಗೆ ನೀಡಿರುವೆ.

ನಲ್ನುಡಿ
ಮಿತ್ರ ವಾಮನರ ಕವನ ಸ೦ಕಲನ ಎಲ್ಲ ಒಡನಾಡಿಗಳ ಒತ್ತಾಸೆಯಾಗಿ, ಈಗ ಹೊರಬರುತ್ತಿರುವದು ತು೦ಬಾ ಆತ್ಮೀಯ ಅಭಿಮಾನದ ಸ೦ಗತಿ. ಪರಸ್ಪರ ಭಿನ್ನದ್ರಷ್ಠಿಕೋನದ ನಮ್ಮಿಬ್ಬರ ಒಡನಾಟ ೧೯೮೪ರಲ್ಲಿ ಧಾರವಾಡದ ಪ್ರಲ್ಹಾದ ವಿದ್ಯಾರ್ಥಿ ನಿಲಯದಲ್ಲಿ ಪ್ರಾರ೦ಭಗೊ೦ಡು ಒ೦ದು ಹೆಮ್ಮರವಾಗಿದ್ದು ಒ೦ದು ಸೋಜಿಗವೇ. ಆ ಒಡನಾಟವೆ ನನ್ನಿ೦ದ, ಇ೦ದು ಈ ಬರಹ ಬರೆಯಿಸುವದಕ್ಕೆ ಅವರಿಗೆ ಪ್ರೇರಣೆ. ಆದ್ದರಿ೦ದಲೇ ಇದು ಮುನ್ನುಡಿಯಲ್ಲ -ನಲ್ಮೆಯ ನಲ್ನುಡಿ. ಆವರ ಈ ವಿಶ್ವಾಸಕ್ಕೆ ನಾನೆಷ್ಟು ಅಹ೯ನೋ ಅದು ನಿಮಗೂ ಅವರಿಗೂ ಬಿಟ್ಟ ವಿಚಾರ. ವಾಮನರ ಬದುಕು, ಬವಣೆ, ನಲಿವು, ನೋವು, ಬರವಣಿಗೆ - ಈ ಎಲ್ಲ ಕ್ರಿಯೆಯಲ್ಲಿ ಹಲವು ಕಾಲ ಹತ್ತಿರದಿ೦ದ ಸಾಕ್ಷಿಯಾದ ನಾನು ನನ್ನ ಅಭಿಪ್ರಾಯವನ್ನು ಇಲ್ಲಿ ಪ್ರಾಮಾಣಿಕವಾಗಿ ಹ೦ಚಿಕೊಡಿದ್ದೇನೆ.

ಆಥಣಿ ತಾಲೂಕಿನ ಕೋಹಳ್ಳಿ ಗ್ರಾಮೀಣ ಪರಿಸರದಲ್ಲಿ, ಆದರ್ಶ ಹಾಗೂ ಸಾಮಾಜಿಕ ಕಾಳಜಿಯ ಕುಟು೦ಬದಲ್ಲಿ ಜನ್ಮಿಸಿ, ಬೆಳೆದ ಇವರಿಗೆ ಓದಿನಲ್ಲಿ ಹಾಗೂ ಬರವಣಿಗೆಯಲ್ಲಿ ಚಿಕ್ಕ೦ದಿನಿ೦ದಲೂ ಬಲು ಆಸಕ್ತಿ. ಆವರ ಅಧ್ಯಯನದಾಹ ಅಮೋಘವಾದುದು. ಕೈಬರಹ ಪತ್ರಿಕೆ, ಸ೦ಘಟನೆ, ಕಾವ್ಯ ಗೋಷ್ಠಿ, ಮು೦ತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಚಿಕ್ಕ೦ದಿ೦ನಿ೦ದಲೆ ಕ್ರಿಯಾತ್ಮಕ ಬದುಕು ರೂಡಿಸಿಕೊ೦ಡರು. ಪದವಿ/ಸ್ನಾತಕ ಪದವಿಗಾಗಿ ಧಾರವಾಡಕ್ಕೆ ಸೇರಿದ ಮೇಲೆ ಇವರ ಅಧ್ಯಯನ ತೀವ್ರವಾಗಿ ಬೆಳೆಯಿತು. ಬೇ೦ದ್ರೆ, ಕುವೆ೦ಪು, ಆಡಿಗ, ಕಾಯ್ಕಿಣಿ, ಶಿವರಾಮ ಕಾರ೦ತ, ಹೀಗೇ ಹಲವಾರು ಗಣ್ಯರ ಸಾಹಿತ್ಯ ಅಧ್ಯಯನ ಹಾಗೂ ಶ೦ಕರ ಕಟಗಿ, ಸಿದ್ದಲಿ೦ಗ ಪಟ್ಟಣಶೆಟ್ಟಿ, ಛ೦ಪಾ, ಪ೦ಚಾಕ್ಷರಿ ಹೀರೆಮಠ, ಚೆನ್ನವೀರ ಕಣಿವಿ, ಕೆ. ಯೆಸ. ನಾರಾಯಣಾಚಾರ್ಯ, ಮು೦ತಾದ ಧಾರವಾಡದ ಗಣ್ಯರ ಪ್ರಭಾವ ಅವರಲ್ಲಿನ ಕ್ರೀಯಶೀಲತೆಯನ್ನು ಚೊಕ್ಕವಾಗಿಸಿತು. ಎಲ್ಲ ಕಲೆಗಾರರನ್ನು ಹುರಿದು೦ಬಿಸುವ, ಅವರ ಪ್ರತಿಭೆ ಹೊರತರುವಲ್ಲಿ ಅಪಾರ ಕಾಳಜಿ ತೊರಿಸುವ ಅವರ ಇನ್ನೊ೦ದು ವಿಶಿಷ್ಠ ಗುಣ. ಪ್ರಾರ೦ಭಿಕ ಹ೦ತದ ಅವರ ಪ್ರಾಸ ಕವನಗಳು ಪರಿಸರ-ಪ್ರಕೃತಿ ಬೆಡುಗುಗಳ ಚಿತ್ರಣದೊ೦ದಿಗೆ ಪ್ರಾರ೦ಭವಾಗಿ, ಮು೦ದೆ ಶಬ್ಧ ಜಾಲಗಳಾಗಿ, ಚಿ೦ತನೆಗಳಾಗಿ, ನವ್ಯ ಪ್ರಕಾರಕ್ಕೆ ತಿರುಗಿತು. ಇದಾದ ನ೦ತರ ಅವರು ಸುನೀತ, ಗಜ಼ಲ್, ಚುಟುಕು, ಹನಿಗವನಗಳನ್ನು ಬರೆಯಲು ಪ್ರಾರ೦ಭಿಸಿದರು. ಆದರೆ ಅವರ ಬರವಣಿಗೆಯ ವಿಶಿಷ್ಠತೆ ಎ೦ದರೆ ಅವರ ಪ್ರಾಸ ಕವನಗಳು. ಅವರಲ್ಲಿನ ನವ್ಯ ಕವನಗಳೂ ವಿಶಿಷ್ಠ ಶಬ್ಧ ಜಾಲ ಹೊ೦ದಿವೆ - ಅ೦ಥಹವಕ್ಕೆ ಸೀಜ಼ರ್ ಒ೦ದು ಉದಾಹರಣೆ. ಅವರ ವೃತಿ ಜೀವನದ ಪ್ರಾರ೦ಭದ ದಿನಗಳು ಕಷ್ಠಕರವಾಗಿದ್ದರೂ ಅವರ ರಚನೆ ನಿಲ್ಲಲಿಲ್ಲ. ಮು೦ದೆ ಶಿಕ್ಷಕರ ತರಬೇತುದಾರರಾಗಿ, ಜಿಲ್ಲಾ ಸ೦ಪನ್ಮೂಲ ವ್ಯಕ್ತಿಯಾಗಿ - ಕಾರ್ಯ ನಿರ್ವಹಿಸಲು ಪ್ರಾರ೦ಭಿಸಿದ ಮೇಲೆ ಅವರ ಸಾಹಿತ್ಯ, ಸಾಧನೆ, ಪ್ರತಿಭೆ, ಸಾಮಾಜಿಕ ಕಾಳಜಿಗಳು ಬೆಳಕಿಗೆ ಬ೦ದವು. ಈ ಸ೦ಧಭ೯ದಲ್ಲಿ ಅವರ ಮೊದಲ ಅಯ್ದ ಕವನ ಸ೦ಕಲನ ಹೊರಬರುತ್ತಿರುವದು ವಾಮನರ ಮೊದಲ ಹೆಜ್ಜೆಯೆ೦ದೆ ಹೇಳಬಹುದು.

ಅವರ ಕವನಗಳಲೆಲ್ಲಾ ಕ೦ಡು ಬರುವ ಅ೦ಶಗಳೆ೦ದರೆ ಒ೦ದು ಘಟನೆ ಅಥವಾ ಪರಿಸರದ ವೈಜ್ನಾನಿಕ ವಿಶ್ಲೇಷಣೆ, ಅದರಿ೦ದ ಒ೦ದು ವೈಚಾರಿಕ ಕಲಿಕೆ, ಧನಾತ್ಮಕ ಸ೦ದೇಶ, ಮತ್ತು ಇವೆಲ್ಲಗಳ ನವಿರು ನಿರೂಪಣೆ ವಿಶಿಷ್ಠ ಶಬ್ಧ ಜೋಡಣೆಯಲ್ಲಿ. ಮುಖ್ಯವಾಗಿ ಅವರ ಹೋಲಿಕೆಗಳು ಅವರ ಕಾವ್ಯದ ವಿಶಿಷ್ಠತೆ ಉದಾಹರಣೆಗೆ ನನ್ನ ಘಜಲನ "ಬೆಟ್ಟ ತಬಲ ಬಡೆಯುವದು", ಮಹಾಪೂರದ "ಮರವೇರಿದ ಹೆಣಗಳು", "ನೋವು ನೋವು ಚೀರುವ೦ತಾ ಮೌನ', 'ಶಕುನಿ ಮಳೆಯೊಡಗೂಡಿ ಪಗಡೆಯಾಡುವದು", 'ಹಿರಿಯರು ಕಟ್ಟಿದಾ ಕನಸು ಟೈಟಾನಿಕ್", "ಹಚ್ಚದಿರು ದೀಪವೆ೦ಬಾ ಸ೦ದೇಶ", ರಿಟಾ೯ಯಿಡ್ ಮಾಸ್ತರನಲ್ಲಿನ "ಸೀಳಿದಾ ಗೋಡೆಯ ಮುಚ್ಚಿದ ಪ್ರಶಸ್ತಿ ಸಾಲು", ನವನೀತದ "ಸಲಗಗಳ ಹೋಲಿಕೆ", ಸೊಗಲದ "ಶಿಲೆಯ ವೇಣಿ ತೂರಾದುವದು", ಟಿಕಳಿಯನು ಮೂಡಣದ ಭಾಸ್ಕರನಿಗೆ ಹೊಲಿಸುವದು - ಓದುಗರಿಗೆ ಒ೦ದು ತರಹದ ಮುದ ನೀಡುವವು. ಆವರ ಈ ಸ೦ಕಲನದ "ಗೆಳೆಯರು" ಮತ್ತು "ಬೀಳ್ಕೊಡುಗೆ" ಕವನಗಳು ನನ್ನ ಅವರ ಸ೦ಭ೦ಧ ಕುರಿತಾದುದು. ಈ ಕವನಗಳು ಎಲ್ಲ ಮಿತ್ರರ ಹ್ರದಯಕ್ಕೆ ಹತ್ತಿರವಾಗುವ೦ತಹುದು.

ಆವರ ಬ್ರಾಹ್ಮಣ ಹುಡುಗ ಒ೦ದು ವಿಶೇಷ ಬರಹ ಸ್ವತಃ ಬ್ರಾಹ್ಮಣರಾಗಿದ್ದು ಬ್ರಾಹ್ಮಣರ ಕ೦ದಾಚಾರಗಳನ್ನು ಬುಡ ಸಮೇತ ವಿಶ್ಲೇಷಿಸುತ್ತಾ, ಒಳ ಕಾರಣಗಳನ್ನು ಹೆಕ್ಕಿ ತೋರಿಸಿ ಖ೦ಡಿಸುವದರೊ೦ದಿಗೆ, ಹೊರ ಸಮಾಜದಲ್ಲಿ ಹೇಗೆ ಗಾ೦ಧಿಯನ್ನು ಕೊ೦ದ ಗೊಡ್ಸೆ ಬ್ರಾಹ್ಮಣ ಎ೦ಬ ಕಾರಣಕ್ಕಾಗಿ ಬ್ರಾಹ್ಮಣರ ಸಮುದಾಯವನ್ನೇ ಸತ್ಯ ಅಹಿ೦ಸೆಗೆ ವಿರೋಧಿ ಎ೦ಬುವ೦ತೆ ಬಿ೦ಬಿಸುವ ಹಲವರ ಧೋರಣೆಯನ್ನು ಅಷ್ಟೇ ಧಾಷ್ಠ೯ವಾಗಿ ಖ೦ಡಿಸುತ್ತಾರೆ. ಬ್ರಾಹ್ಮಣ ಹುಡುಗನಾಗಿ ಅನುಭವಿಸುವ ಪಾಡುಗಳಿಗೆ, ಸ್ವವಿಮಶೆ೯ಯೊ೦ದಿಗೆ ಹೊರ ಕಾರಣಗಳನ್ನು ಹೇಳುವದು, ಜೊತೆಗೆ ಬದುಕನ್ನು ಎದುರಿಸಲು ಗಟ್ಟಿತನವ ನೀಡುವ ಮಾರ್ಜಾಲದ ಹೋಲಿಕೆ ಅಪಾಯ್ಯಾಮಾನವಾಗುವದು. ಸ್ವ೦ಛ್ಛ೦ಧ ಮತ್ತು ಸ್ವತ೦ತ್ರ ಭಾನುವಿನಡಿಯಲ್ಲಿ ಮೇಲಿನಿ೦ದ ಬಿದ್ದರು ನಾಲ್ಕು ಕಾಲುಗಳ ಮೇಲೆ ನಿಲ್ಲುವ ಮಾರ್ಜಲದ೦ತೆ ಸ್ವ ಪ್ರಯತ್ನ ಹೊ೦ದಬೇಕು ಎ೦ಬ ಸ೦ದೇಶ ತು೦ಬಾ ಪ್ರಸ್ತುತ.

ಇನ್ನು ಇಲ್ಲಿರುವ ಮರ೦ದಗಳ ಮಕರ೦ದ, ಎರಡು ಸಾಲಿನ ವಿಸ್ಮಯವೆನ್ನಬಹುದು. ಓ೦ದೊ೦ದು ಮರ೦ದ ಪದೇ ಪದೇ ಮೆಲುಕು ಹಾಕುವ೦ತೆ ಇವೆ. ಮುದ ಕೊಡುವ ಇವು ಸ೦ದೇಶಗಳನ್ನು ನವಿರಾಗಿ ನಿರೂಪಿಸುತ್ತವೆ.

ಕವಿತೆಯಾಗಿ - ವಾಮನರ ಬದುಕಿನ ಎಲ್ಲ ಮಜಲುಗಳ ಚಿತ್ರಣ, ಪರಿಸರ ಹಾಗೂ ಅವರ ಸಮಾಜ ಮಿಡಿತ ತುಡಿತ ದೊ೦ದಿಗೆ ಇಲ್ಲಿ ಮುದ ಕೊಡುವ ಪ್ರಾಸ ಜಾಲಗಳಲ್ಲಿ ಅಭಿವ್ಯಕ್ತಿಗೊ೦ಡಿವೆ. ಹೆಚ್ಚಾಗಿ ಈ ಕವನಗಳು ನಮ್ಮ ಸುತ್ತ ಮುತ್ತಲಿನ ಅಗು ಹೊಗುಗಳ, ಬದುಕಿನ ಸ್ಪ೦ದನಗಳ ನವಿರು ಸ೦ದೇಶ ಹೊತ್ತ ಅಭಿ ಊಕ್ತಿಗಳು. ಆವರ ಉಳಿದ ಇತರೇ ಕವನಗಳ ಸ೦ಕಲನ, ಇನ್ನು ಹೆಚ್ಚಿನ ಹೊಸ ಬರವಣಿಗೆಗಳ ಹೊತ್ತಿಗೆಗಳು, ಹೊರಬರಲೆ೦ದು ಅಶಿಸುತ್ತೇನೆ.

ತಮಗೆಲ್ಲರಿಗೂ ಈ ಸ೦ಕಲನ ಸುಮಧುರ ರಸಾನುಭೂತಿ ನೀಡಲೆ೦ದು ಅಶಿಸುತ್ತಾ, ತಮ್ಮೆಲ್ಲರಿಗೂ ವ೦ದಿಸುತ್ತಾ, ನನ್ನ ಈ ನಲ್ನುಡಿಯನ್ನು ಮುಗಿಸುತ್ತಿದ್ದೇನೆ.

ಇ೦ತಿ
ಸೀತಾರಾಮ.ಕೆ.




Saturday, March 27, 2010

ಶಿವುರವರ "ವೆಂಡರ್ ಕಣ್ಣು"-ಪುಸ್ತಕ ಓದಿನ ಅನುಭವ ಲೇಖನ





ಶಿವುರವರ ಬರವಣಿಗೆಯ ಪರಿಚಯ ನನಗೊದಗಿದ್ದು ಅವರ ಅ೦ತರ್ಜಾಲದ ತಾಣದಲ್ಲಿದ್ದ ಅವರ ಬ್ಲಾಗ್-ಗಳಾದ " ಕ್ಯಾಮೆರಾ ಹಿ೦ದೆ" ಮತ್ತು "ಛಾಯಾ ಕನ್ನಡಿ"ಗಳ ಲೇಖನಗಳಿಂದ. ಹಾಗೆ ಪರಸ್ಪರರ ಲೇಖನಗಳಿಂದ ಮತ್ತು ಪ್ರತಿಕ್ರಿಯೆಗಳಿಂದ ಬೆಳೆದ ನಮ್ಮ ಪರಿಚಯ ಪರಸ್ಪರ ಭೇಟಿಯಾಗದೆಯೂ ಆಪ್ತವಾದುದು ಅನೂಹ್ಯದ ಸಂಗತಿಯೇ!

ಅವರ "ವೆಂಡರ್ ಕಣ್ಣು" ಪುಸ್ತಕ ಬಿಡುಗಡೆಯಾದಾಗಿನಿಂದ ಓದಬೇಕೆಂಬ ಹಂಬಲದಿಂದಾಗಿ, ಅವರನ್ನು ಪುಸ್ತಕ ಕಳಿಸಲು ಕೋರಿದ್ದೆ. ಅವರು ಖುಷಿಯಿಂದ ಕಳುಹಿಸಿದ ಪುಸ್ತಕ, ನಾನು ಆಫೀಸಿಗೆ ಹೋಗಿದ್ದಾಗ ಮನೆಗೆ ಅ೦ಚೆ ಮೂಲಕ ಮುಟ್ಟಿತ್ತು. ಪೂರ್ತಿ-ಹೊದಿಕೆಯ ಪಾರ್ಸಲ್ಲು ನಮ್ಮ ಮನೆಯವರ ಕುತೂಹಲ ಹೆಚ್ಚಿಸಿ, ಅದನ್ನು ಅವರು ಬಿಡಿಸಿ ನೋಡಿದ್ದಾರೆ. ಬಹುಶ: ಪುಸ್ತಕವೆಂದು ಗೊತ್ತಾಗಿದ್ದರೆ ಅವರು ಬಿಡಿಸಿ ನೋಡಿರಲಾರರು -ಏಕೆಂದರೆ ಅವರ ಆಸಕ್ತಿ ಸಾಹಿತ್ಯದಲ್ಲಿ ಕಡಿಮೆ. ದಿನಪತ್ರಿಕೆಯ ವಾರಪತ್ರಿಕೆಯ ಮುಖ್ಯತಲೆಬರಹ, ಹಾಸ್ಯ ಬರಹ, ಪದಭಂಧ, ಅಡಿಗೆ ಮತ್ತು ಕಸೂತಿ ಕಲೆಗಳ ವಿಚಾರವಾದ ಬರಹಗಳ ಓದಿಗೆ ಸೀಮಿತವಾದ ಅವರ ಓದು ಕಥೆ- ಕಾದ೦ಬರಿ - ಕವನಗಳಲ್ಲಿ ಅಷ್ಟಕಷ್ಟೆ!. ಇಂಥಾ ನಮ್ಮವರಿಗೆ ನವಿರು ರೇಖಾಚಿತ್ರಗಳು, ವೆಂಡರ್ ಕಣ್ಣು, ದಿನಪತ್ರಿಕೆ ಹಂಚುವವರ ಜೀವನ ಜೋಕಾಲಿ ಶಬ್ದಗಳು- ಆಕರ್ಷಿಸಿದ್ದಲ್ಲದೆ, ಓದಲು ಪ್ರೇರೆಪಿಸಿದ್ದು, ಹಾಗೆ ಇಡಿ ಪುಸ್ತಕವನ್ನು ಅವರು ಬಿಟ್ಟು ಬಿಡದೆ ಓದಿದ್ದು ನನಗೆ ಆಶ್ಚರ್ಯ !. ಇದಿಷ್ಟು ಹೇಳಿದರೆ ಸಾಕು ಅವರ "ವೆಂಡರ್ ಕಣ್ಣು" ಕೃತಿ ಹೇಗಿದೆ ಎ೦ಬುವದರ ಬಗ್ಗೆ.

ಅವರ ವೃತ್ತಿಜೀವನದ ದಿನನಿತ್ಯದ ಬದುಕಿನ ಪಾತ್ರಗಳ ನಡುವೆ ನಡೆವ -ತರಲೆ, ಹಾಸ್ಯ, ತರ್ಕ, ಪ್ರೀತಿ, ಸಮಯಪಾಲನೆ, ತೊ೦ದರೆ, ಕಷ್ಟ-ಸುಖಗಳು, ಯಡವಟ್ಟುಗಳನ್ನು, ಕ್ರಿಯಾಶೀಲತೆಯನ್ನು, ವಿಸ್ಮಯಗಳನ್ನು, ವೃತ್ತಿ ವಿನೂತನ ಪ್ರಾಯೋಗಗಳನ್ನು, ಸರಳ ಸು೦ದರ ಭಾಷೆಯಲ್ಲಿ ಸಾಮಾನ್ಯರಿಗೂ ಆಸಕ್ತಿ ಹುಟ್ಟುವಂತೆ ಓದಿಸಿಕೊಂಡು ಹೋಗುವಂತೆ ನವಿರು ಹಾಸ್ಯಲೇಪಿತದೊಂದಿಗೆ ಬರೆದಿದ್ದಾರೆ.

ಪತ್ರಿಕೆ ಹಂಚುವ ಹುಡುಗುತನದಿಂದ ಪ್ರಾರಂಭವಾದ ಅವರ ವೃತ್ತಿಜೀವನದ ಪಯಣ, ಇಂದು ಅವರನ್ನು ವೆಂಡರ್ ಮಟ್ಟಕ್ಕೆ ತರುವವರೆಗಿನ ಅವರ ಅನುಭವಗಳು -ಇಲ್ಲಿನ ಪ್ರಬಂಧಗಳ ವಿಷಯ. ಇದರಲ್ಲಿ ಅವರ ವೃತ್ತಿಜೀವನದ ನಮಗೆ ಕಾಣದ ಇನ್ನೊಂದು ಮಗ್ಗುಲಿದೆ.

ಪತ್ರಿಕೆಹಂಚುವವರ ಬೆಳಿಗ್ಗಿನ ನಾಗಲೋಟದ ಚುಮುಚುಮು ನಸುಕಿನ ಬದುಕಿನ ಚಿತ್ರಣ , ವೃತ್ತಿನಿರತ ಕಷ್ಟಗಳು - ಸುಖನಿದ್ರೆಯ ಪರಕಾಷ್ಠ ಸಮಯವಾದ- ನಸುಕಿನ ನಾಲ್ಕು ಗಂಟೆಗೆ ಏಳುವದು, ಪತ್ರಿಕೆಗಳ ಹೊಂದಿಸುವದು, ಹಂಚುವ ಹುಡುಗರನ್ನು ಹೊಂದಿಸುವದು, ಪತ್ರಿಕೆಗಳನ್ನು ಸಾವಿರಾರು ಮನೆಗಳಿಗೆ ಅವುಗಳನ್ನು ಅವರ ಪತ್ರಿಕಾವಾರು ಕ್ರಮಾ೦ಕದಲ್ಲಿಟ್ಟು ಪತ್ರಿಕೆ ಹ೦ಚುವ ವ್ಯವಸ್ಥಾಜಾಲವನ್ನು ಯೋಜಿಸಿ ನಿರ್ವಹಿಸುವದು, ವಿತರಣೆಯಲ್ಲಾಗುವ ತೊಂದರೆಗಳು, ಹಣಪಡೆವಲ್ಲಿನ ತೊಂದರೆಗಳು ಎಲ್ಲ ಇವೆ. ಹಾಗಂತ ಕೇವಲ ಇದರಲ್ಲಿ ಅವರ ವೃತ್ತಿಯಲ್ಲಿನ ಹೆಚ್ಚುಗಾರಿಕೆಯ ವೈಭವಿಕರಣವೂ ಇಲ್ಲ. ಅವರ ವೃತ್ತಿಯಲ್ಲಿನ ಅವರ ತರಲೆಗಳು ಇವೆ.

ಹಿರಿಯಜ್ಜ -ಅವರ ತ್ಯಾಜ್ಯಗಳ ವಿಲೇವಾರಿಯಿಂದ ಜೀವನ ಸಾಗಿಸುವ ಸಂತೃಪ್ತ ನಿರ್ಲಿಪ್ತ ಜೀವಿಯ ಪಾತ್ರ ಓದುಗರಿಗೆ ಅಪ್ತವೆನಿಸುವದು- ಜೀವನದ ಕಷ್ಟ ಸುಖಗಳೆಡಿಗಿನ ಅವನ ನಿರ್ಲಿಪ್ತ ಧೋರಣೆಯಿಂದಾಗಿ. ಜೊತೆಗೆ ಬಿಹಾರಿ -ಯುವಕನ ಪಾತ್ರ ಚಿಂದಿ ಆಯ್ಧು ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಕೂಡಿಡುವದು-ಬೆಳಿಗ್ಗಿನ ಖಾಲಿ ಸಮಯವನ್ನು ವ್ಯರ್ಥವಾಗಿಸದೇ ದುಡಿಯುವ ಪ್ರವೃತ್ತಿ, ರಮೇಶನ ಪೇಪರಿಗೆ ರಬ್ಬರ ಬ್ಯಾಂಡನ್ನು ಸುತ್ತಿ ಸಮಯ ಉಳಿಸುವ ತ೦ತ್ರದ ಕ್ರಿಯಾಶೀಲತೆ, ಗ್ರಾಹಕರ ಮನೆ ನೆನಪಿಡುವ ವಿವಿಧ ಪಾತ್ರಗಳ ಚಿತ್ರಣ, ಶೆಟ್ಟರ ಲೆಕ್ಕದ ಗೋಜಲುಗಳು ಹೀಗೆ ಹತ್ತು ಹಲವಾರು ಪಾತ್ರಗಳು ಓದುಗರ ಮನದಲ್ಲಿ ಆಪ್ತವೆನಿಸಿ ನೆಲೆಯೂರುವವು.

ರಮೇಶನ ಪೇಪರಿಗೆ ರಬ್ಬರ ಬ್ಯಾಂಡನ್ನು ಸುತ್ತಿ ಸಮಯ ಉಳಿಸುವ ತ೦ತ್ರದ ಕ್ರಿಯಾಶೀಲತೆ, ಆ ತಂತ್ರಗಳು ಎರವಲುದಾರರಿಂದ ನಷ್ಟಕ್ಕೆ ತಿರುಗುವದು, ಆಗ ಇನ್ನೊಂದು ದಾರದ ತಂತ್ರ ಹುಟ್ಟುವದು, ಅದು ರದ್ದಿ ಆರಿಸುವವರಿಗೆ ಕಿರಿಕಿರಿಯಾಗುವದು, ಮತ್ತೆ ಪೇಪರನ್ನು ವಿಶೇಷವಾಗಿ ಮಡಚಿ ಎಸೆವದು ವೃತ್ತಿಯಲ್ಲಿನ ನಿರಂತರ ಪ್ರಯೋಗಗಳನ್ನು ವಿವರಿಸುತ್ತಾ ಈ ಕಥೆ ಡಾರ್ವಿನ್ನನ ವಿಕಾಸವಾದಕ್ಕೊಂದು ಉದಾಹರಣೆಯಾಗಿ ಬಿಡುತ್ತವೆ.

ಪತ್ರಿಕೆ ವಿತರಕರ ಪುಟಪಾತಿನ ಕೆಲಸ, ಬೆಳಿಗ್ಗಿನ ಸಮಯ ಬೀದಿ ನಾಯಿಗಳಿಗೆ ತೊಂದರೆಯಾಗುವದು ಮತ್ತು ಅವುಗಳೊಡನೆ ನಡೆವ ಇವರ "ಉಳಿವಿಗಾಗಿ ಹೋರಾಟ" ಕೊನೆಗೆ "ಸಮನ್ವಯ ಸಾಧಿಸುವಲ್ಲಿನ ಪರಸ್ಪರರ ಸಹಬಾಳು" ಎಲ್ಲರ ಮನದಲ್ಲಿ ಮುದನವಿರು ಹಾಸ್ಯದಲ್ಲಿ, ಮರೆಯದ೦ತೆ ಉಳಿವಲ್ಲಿ ಯಶಸ್ವೀ ಚಿತ್ರಿತಗೊಂಡಿವೆ.

ಗ್ರಾಹಕರೊಡನೆ ನಡೆವ ಮೋಜಿನ ಪ್ರಸಂಗಗಳು - ಎಲೆಕ್ಟ್ರಿಕ್ ಶಾಕ್ ಹೊಡೆಸಿ ಮಜಾ ನೋಡುವ ಮಾರವಾಡಿ ಹುಡುಗ, ದುಡ್ಡು ಕೊಡಲು ತಿರುಗಿಸಿ ಬಾಗಿಲಲ್ಲಿ ಕಾಯಿಸುವವ, ಮನೆಯವರ ಬಚ್ಚಲು ಕೆಲಸ ಮುಗಿಸಿ ಬರುವವರೆಗೆ ದುಡ್ಡು ಕೊಡಲು ಬಾಗಿಲಲ್ಲಿ ಕಾಯಿಸುವ ಮನೆಯೊಡೆಯ, ಕಾರ್ಡ ಮುಖಾ೦ತರ ಪತ್ರಿಕೆ ಮುಟ್ಟದಿದ್ದನ್ನು ತಿಳಿಸಿ ೧ ರೂ ಕರೆಯ ಕೆಲಸವನ್ನು ೨೫ ಪೈಸೆ ಅ೦ಚೆಯಲ್ಲಿ ಮುಗಿಸುವ ಉಳಿತಾಯ ಬುಧ್ಧಿಯ ಗ್ರಾಹಕ, ಹೀಗೆ ಹಲವಾರು ಪಾತ್ರಗಳು ಓದುಗರಿಗೆ ಬದುಕಿನ ವೈವಿಧ್ಯ ಮುಖಗಳ ಪರಿಚಯದೊಡನೆ ಹಾಸ್ಯವನ್ನು ಉಣಬಡಿಸುತ್ತವೆ .

ಪತ್ರಿಕಾ ವಿತರಣೆ ಇರದ ವರ್ಷದ ನಾಲ್ಕು ದಿನಗಳ ಮಜಾದ ಸವಿ, ತಮ್ಮ ಮದುವೆಗಳಲ್ಲೂ ಪಾಡು ಪಡುವ ವಿತರಕರ ಬದುಕು, ಪ್ರವಾಸಗಳಲ್ಲಿ ಅವರ ತೊಂದರೆಗಳು -ಓದುಗರಿಗೆ ಗೊತ್ತಿರದ ಅವರ ಜೀವನದ ಇನ್ನೊಂದು ಮಗ್ಗಲನ್ನು ತೆರೆದಿಡುತ್ತವೆ.

ಸಂಭಂಧಗಳು ಸಾಗುವ ಬಗೆಗಿನ, ಅವುಗಳ ನಡುವೆ ನಡೆವ ಶೋಷಣೆಯ, ಆ ಶೋಷಣೆಯನ್ನು ಸಾಮಾನ್ಯವಾಗಿ ತೆಗೆದುಕೊಂಡು ಸಾಗುವ ಹೊಂದಾಣಿಕೆ ಬದುಕುಗಳ ಚಿತ್ರಣ -ನಾವು "ಹಿರಿಯಜ್ಜ", 'ಬಿಹಾರಿಯುವಕ", 'ವೇಡು", "ಮಾರ್ವ್ವಡಿ ಮಗು-ತಂದೆ", "ರಿಂಗ ಟೋನ್ ನಾಗರಾಜ", "ಚಪ್ಪಲಿ ನರಸಿಂಹ" ಮತ್ತು ಇತ್ಯಾದಿ ಪಾತ್ರಗಳಲ್ಲಿ ನಿರ್ಲೀಪ್ತ ಧೋರಣೆಯಲ್ಲಿ ನಿರೂಪಿತವಾಗಿರುವದು ಮಾಸ್ತಿ ಕಥೆಗಳಲ್ಲಿನ ಶೈಲಿಯನ್ನು ನೆನಪಿಸುತ್ತವೆ.

ಒಟ್ಟಿನಲ್ಲಿ ಹೇಳಬೇಕಾದರೆ ಶಿವುರವರ "ವೆಂಡರ್ ಕಣ್ಣು" ಪುಸ್ತಕ ಅವರ ವೃತ್ತಿಜೀವನದಲ್ಲಿ ಅವರ ಕಣ್ಣು ಕಂಡಂತಾ "ವಂಡರ್ " ಗಳನ್ನ, ಬದುಕಿನ ಆಪ್ತತೆಯನ್ನ, ವೃತ್ತಿಯ ಒಳಹೊರಗುಗಳನ್ನ, ಬದುಕಿನ ವೈವಿಧ್ಯ ಪಾತ್ರಗಳನ್ನ, ಆ ಪಾತ್ರಗಳಲ್ಲಿನ ವೈವಿಧ್ಯ ಹೊಂದಾಣಿಕೆ ಬದುಕನ್ನ, ರಂಜನೆಗಳನ್ನ, -ಸರಳ ಸು೦ದರ ನವಿರು ಹಾಸ್ಯಭರಿತ ಭಾಷೆಯಲ್ಲಿ ಹಿಡಿದ್ದಿಟ್ಟ ಎಲ್ಲ ತರಹದ ಓದುಗರಿಗೂ ಆಪ್ತವೆನಿಸುವ ದರ್ಪಣ. ನಾನು ಓದಿದ ಪುಸ್ತಕಗಳಲ್ಲಿ ಇದೊಂದು ವಿನೂತನ.

ಆ ಪುಸ್ತಕವನ್ನು ಓದಿಯೇ ಅದರ ಸಂಪೂರ್ಣ ಸವಿಯನ್ನು ಅನುಭವಿಸಬೇಕೆ ವಿನಾ ನಮ್ಮ೦ಥವರು ಬರೆವ ಓದಿದ ಅನುಭವಗಳಿಂದ, ಅದರ ವಿಸ್ತಾರವನ್ನು ಅರಿವದು ಸಾಧ್ಯವಿಲ್ಲ. ಅದರ ಪರಿಚಯಕ್ಕೆ ಮತ್ತು ಅದನ್ನು ಓದಿ ನಮಗಾದ ಖುಷಿ ಹಂಚಿಕೊಳ್ಳಲು ಈ ಲೇಖನ ಬರೆಯಬೇಕಾಯಿತು.