Tuesday, October 18, 2011

ಸನ್ಯಾಸಿ ಮತ್ತು ನಾಗರಹಾವಿನ ಕಥೆ

(ಚಿತ್ರ ಕೃಪೆ : ಅಂತರಜಾಲ ಸರಕು ಮಿಶ್ರಣ )

ಜನಪದ
ಮೂಲದ ನಿರ್ವಹಣೆ ಪಾಠದ ಕಥೆ

(FOLK STORY OF MANAGEMENT LESSONS)


ಒಂದಾನೊಂದು ಊರು...
ಊರಬದಿಯಲ್ಲೊಂದು ಕೆರೆ....
ಕೆರೆಬದಿಗೊಂದು ಪೊದೆ......
ಪೊದೆಯಲ್ಲೊಂದು ಕಾರ್ಕೋಟಕ ನಾಗರನ ವಾಸ....
ಹತ್ತು ಹಲವರನ್ನು ಕಚ್ಚಿ...ಕೊಂದಿತ್ತು....
ಅಲ್ಲಿ ಜನರು ತಿರುಗಲು ಹೆದರುತ್ತಿದ್ದರು.....ಆ ಪೊದೆಯ ಬದಿಯ ರಸ್ತೆ ನಿರ್ಜನವಾಗಿತ್ತು....
ಕೊಳಕ್ಕೆ ಸುತ್ತು ಬಳಸಿನ ರಸ್ತೆಯ ಕಂಡುಕೊಂಡಿದ್ದರು ಊರಜನ.
ಆದರೂ ಕೆರೆಬದಿಯಲ್ಲೂ ಕಾಣಿಸಿಕೊಂಡು ಅಪಾಯ ಒಡ್ಡುತ್ತಿದ್ದ ನಾಗರಾಜ.
ಜನ ನಾಗಣ್ಣನ ಉಪಟಳದಿಂದ ಬೇಸತ್ತಿದ್ದರು.....

ಊರಿಗೊಮ್ಮೆ ಸನ್ಯಾಸಿಯೊಬ್ಬರ ಆಗಮನವಾಯಿತು....
ಕೆರೆಬದಿಗೆ ದೈನಂದಿನ ಕಾರ್ಯಕ್ಕೆ ಹೊರಟ ಅವರಿಗೆ ಊರಜನ ನಾಗಣ್ಣನ ಉಪಟಳದ ಬಗ್ಗೆ ಹೇಳಿ ಎಚ್ಚರಿಸಿದರು....
ಆದರೂ ಸನ್ಯಾಸಿಗಳು ಅದೇ ದಾರಿಯಲ್ಲಿ ಹೊರಟರು...
ನಾಗಣ್ಣನಿಗೆ...ತನ್ನ ವಾಸಸ್ಥಳದ ಹತ್ತಿರ ಧೈರ್ಯದಲ್ಲಿ ಬರುತ್ತಿದ್ದ ಸನ್ಯಾಸಿಯ ಕಂಡು ಕೋಪ ಬಂದು... ಭುಸುಗುಡುತ್ತಾ ಕಚ್ಚಲು ಬಂದ .....
ತಪಶಕ್ತಿಯ ಸನ್ಯಾಸಿಗಳು, ಕಚ್ಚಲು ಬಂದ ಹಾವನ್ನು ಕ್ಷಣ ಮಂತ್ರದಿ ದಿಗ್ಬ್ರಮೆ ಗೊಳಿಸಿ, ನಿಲ್ಲಿಸಿ.. ಅದನ್ನು ಕೇಳಿದರು...
"ಅಯ್ಯಾ ನಾಗರಾಜ ನಿನಗೆ ಜನರನ್ನು ಕಚ್ಚಿ ಸಾಯಿಸುವದರಿಂದ ಸಿಗುವುದೇನು? -ಕಾಡು ಮೃಗಗಳು ಹಸಿವೆಯಾಗದ ಹೊರತು ಬೇಟೆಯಾಡಿ ಕೊಂದು ತಿನ್ನುವದಿಲ್ಲ...ಜನರನ್ನು ಕೊಂದು ನೀನೇನು ಅವರನ್ನು ತಿನ್ನುವೆಯಾ...ಇದರಿಂದ ನಿನಗೇನೂ ಸಿಗುತ್ತೆ? " ಎಂದು ಪ್ರಶ್ನಿಸಲಾಗಿ....ನಾಗಣ್ಣನಿಗೆ ಜ್ಞಾನೋದಯವಾಯಿತು... ಅನ್ಯಾಯವಾಗಿ ತಾನು ಜನರನ್ನು ಸುಮ್ಮನೆ ಕೊಲ್ಲುತ್ತಿದ್ದೆನಲ್ಲಾ ... ಹಸಿವೆಗಲ್ಲ... ಮತ್ತಾವ ಸುಖಕ್ಕೂ ಅಲ್ಲ.... ತಾನು ಅಮಾಯಕರನ್ನು ಕೊಂದೆನಲ್ಲಾ.. ಎಂದು ಪಶ್ಚಾತಾಪಗೊಂಡಿತು....

ಸನ್ಯಾಸಿ ಸತ್ಯದ ಅರಿವು ಮಾಡಿಸಿದ್ದಕ್ಕೆ ವಂದಿಸಿ... "ಅಯ್ಯಾ ಸ್ವಾಮಿಗಳೇ ಇನ್ನು ನಾನು ಯಾರನ್ನು ಕಚ್ಚಿಕೊಲ್ಲುವದಿಲ್ಲ "ಎಂದು ಪ್ರಮಾಣಿಸಿತು...

ಮುಂದೆ ಆ ದಾರಿಯಲ್ಲಿ ತಿರುಗುವವರಿಗೆ ಅದು ಉಪಟಳ ಕೊಡುವದನ್ನು ನಿಲ್ಲಿಸಿತು....
ಸಂತರ ಜ್ಞಾನದ ಮಾತುಗಳಿಂದ ಪ್ರೇರಿತವಾದ ಅದು ತೀವ್ರ ಸಾತ್ವಿಕ ಜೀವನ ನಡೆಸಲು ಪ್ರಾರಂಭಿಸಿತು...
ಜನಕ್ಕೆ ಹಾವು ಕಚ್ಚುವದಿಲ್ಲವೆಂದು ತಿಳಿದ ಬಳಿಕ, ಆ ರಸ್ತೆಯಲ್ಲಿ ಸರಾಗವಾಗಿ ತಿರುಗಾಡ ತೊಡಗಿದರು....
ಕೆಲವು ಕಿಡಿಗೇಡಿಗಳು ಹಾವು ಏನು ಮಾಡುವದಿಲ್ಲವೆಂದು ತಿಳಿದ ಬಳಿಕ ಅದನ್ನು ಕಲ್ಲಿನಿಂದ... ಕೋಲಿನಿಂದ ಹೊಡೆದು ತಮ್ಮ ವಿಕೃತಿ ತೀರಿಸಿಕೊಳ್ಳ ಹತ್ತಿದ್ದರು.. ಮಕ್ಕಳು ಹಾವನ್ನು ಹಿಡಿದು ತಿರುಗಿಸುತ್ತಾ..ಆಟ ಆಡಲು ಪ್ರಾರಂಬಿಸಿದರು.... ಹಾವಿನ ಮೈಯೆಲ್ಲಾ ಗಾಯ ..ವೃಣಗಳಾಗಿ ಅದರ ದೇಹ ಪರಿಸ್ಥಿತಿ ತೀವ್ರ ಹದೆಗೆಟ್ಟು.. ಸಾಯಲು ಇಗಲೋ.. ಆಗಲೋ... ಎನ್ನುವಂತಾಯಿತು....

ಸನ್ಯಾಸಿಗಳು ಮತ್ತೊಮ್ಮೆ ಆ ಹಾದಿಯಲ್ಲಿ ಬರುವಾಗ, ಹಾವನ್ನು ಕಂಡು, ಅದರ ಪರಿಸ್ಥಿತಿ ಕಂಡು, ಮರುಗಿ ಇದಕ್ಕೆ ಕಾರಣವೆಂದು ಕೇಳಿದರು ...
ಆಗ ನಾಗ ವಿನಮ್ರವಾಗಿ "ತಾವು ತಿಳಿ ಹೇಳಿದಂತೆ ಕಚ್ಚುವಾದ ಬಿಟ್ಟೆ... ಅದಕ್ಕೆ ಹೀಗಾದೆ...ಆದರೂ ಬೇಜಾರಿಲ್ಲ... ಇನ್ನೊಬ್ಬರ ಅಲಾಭ ಹತ್ಯೆಯ ದೋಷ ನನಗೆ ತಟ್ಟುವದಿಲ್ಲವಲ್ಲಾ .... ಅದೇ ಸಾಕು ನನಗೆ.." ಎಂದಿತು.

ಆಗ ಸನ್ಯಾಸಿ ಹೇಳಿದರು " ಅಯ್ಯಾ ನಾಗರಾಜ ನಾನು ನಿನಗೆ ಕಚ್ಚುವಾದ ಬಿಡು ಎಂದಿದ್ದೇನೆ ಹೊರತು... ಭುಸುಗುದುವದನ್ನು ಬಿಡು ಎಂದಿಲ್ಲಾ ... ಆತ್ಮರಕ್ಷಣೆಗೆ ಭುಸುಗುದಲೇ ಬೇಕು ಕಚ್ಚುವ... ಕಚ್ಚಿ ಸಾಯಿಸುವ... ಹೆದರಿಕೆ ಸದಾ ಉಪಟಲಿಸುವ ಜನರಿಗೆ ತೋರಿಸಲೇ ಬೇಕು ಇಲ್ಲಾ ಬದುಕುವದು ದುಸ್ತರ" ಎಂದರು...
ಈಗ ನಾಗಣ್ಣನಿಗೆ ತನ್ನ ತಪ್ಪು ಏನೆಂದು ಅರಿವಾಗಿ ಅವರ ಮಾರ್ಗದರ್ಶನದಂತೆ ಮುಂದಿನ ಜೀವನ ಕ್ರಮಿಸಿ ಯಾರಿಗೂ ತೊಂದರೆ ಕೊಡದೆ ತಾನು ತೊಂದರೆ ಪಡೆಯದೇ ಬದುಕಿದ...

ನೀತಿ : ಹೇಗೆ ಇತರರಿಗೆ ಅನಾವಶ್ಯಕ ತೊಂದರೆ ಕೊಡುವದು ತಪ್ಪೋ ಹಾಗೆ ಸ್ವತಹ ತೊಂದರೆಗೊಳಗಾಗುವದು ತಪ್ಪು... ತೊಂದರೆಗಳನ್ನೂ ಬರದಂತೆ ತಡೆಗಟ್ಟಲು ಇತರರಿಗೆ ಸ್ವಲ್ಪ ತೋರಿಕೆಯ ತೊಂದರೆಯನ್ನೂ ತೊಂದರೆಯಾಗದಂತೆ ಪ್ರಯೋಗಿಸಬೇಕು... ತನ್ನ ತೊಂದರೆ ತಡೆಯಲು ತೊಂದರೆ ಕೊಡುವವರಿಗೆ ಸ್ವಲ್ಪ ಬಿಸಿ ಮುಟ್ಟಿಸುವಷ್ಟು ತೊಂದರೆ ಕೊಡಬೇಕಾದುದು ಬದುಕ ಅನಿವಾರ್ಯತೆ..
DON'T BITE TO TROUBLE OTHERS UNNECESSARILY BUT KEEP HISSING FOR SELF DEFENSE

(ಬಹಳ ದಿನಗಳಿಂದಲೂ ಬರೆಯಲಾಗದೆ ಬ್ಲಾಗ್ ಖಾಲಿ ಇದ್ದುದ್ದಕ್ಕೆ ಕ್ಷಮೆ ಇರಲಿ )


Tuesday, October 11, 2011

ಶೂನ್ಯ ದಿಂದ........ ಪರಿಪೂರ್ಣದೆಡೆಗೆ...........

ಸಹ ಬ್ಲೋಗಿಗರಾದ -ಸುಗುಣಾರ " ಮೃದುಮನಸ್ಸು" ಬ್ಲಾಗ್' ನ "ಶೂನ್ಯ" ಕಥೆಯ ಮುಂದುವರೆದ ಭಾಗ..........
(ಮೊದಲ ಭಾಗದ ಕೊಂಡಿ : http://mrudhumanasu.blogspot.com/2011/10/blog-post_09.html)


ಉಸಿರು ಬಿಕ್ಕುತಿದೆ...

ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆ ಯ
ಶೂನ್ಯ ಸಿಂಹಾಸನದಡಿ
ನನ್ನ ಬದುಕು ಜೋತಾಡುತಿದೆ.....

ಇಪ್ಪತ್ತು ವರ್ಷಗಳ ಗಂಡನ ಅಪರಿಮಿತ ಪ್ರೀತಿಯಲ್ಲಿ ನಾನು, ನನ್ನೆಲ್ಲಾ.. ಕೊರತೆಯನ್ನು ಮರೆತು ಆನಂದದಿಂದ ಮರೆತಿದ್ದೆ ...
ತವರ ನೆನಪು ಮಾಸಿತ್ತು ....
ಮಕ್ಕಿಳಿಲ್ಲದ ಕೊರಗೂ ಕಾಡಲಿಲ್ಲ.....
ಬದುಕು.. ಸಾಗಿದ ಬಗೆಯೇ ಅರಿವಾಗಲಿಲ್ಲ....
ಇಂದು ಆ ಅಪರಿಮಿತ ಪ್ರೀತಿ ನೀಡಿದ, ಸಹೃದಯ ಜೀವ.... ನನ್ನಿನಿಯ.... ನನ್ನನ್ನು ..ಬಾಳದಾರಿಯಲ್ಲಿ.. ನಡುವೇ.. ಬಿಟ್ಟಗಲಿದಾಗ .... ಮೇಲಿನ ಗೀತೆ ಮನದಲ್ಲಿ ಗವ್ವೆನ್ನುವಂತೆ ಬಾರಿ ಬಾರಿ ಸುಳಿಯುತ್ತಿದೆ ...

ಮಕ್ಕಳಿಲ್ಲದ ಕೊರಗು ಕಾಡುತ್ತಿದೆ...

ದತ್ತು ಮಗುವನ್ನೂ... ತಂದು ಸಾಕಲಿಲ್ಲವಲ್ಲಾ... ಆಸರೆಗೆ... ಎಂಬ ಭಾವ.. ಅಪರಾಧೀ ಪ್ರಜ್ಞೆಯಾಗಿ ಕಾಡುತಿದೆ ಎನಿಸುತ್ತಿದೆ ....

ವೃದ್ಧ ಅತ್ತೆಮಾವರು ನನಗೆ ಆರ್ಥಿಕ ಭಾರವಾಗಬಾರದೆಂದು ಈಗ ಮೈದುನನ ಮನೆಗೆ ನಡೆದಿಹರು......

ಮೈದುನ -ತಂಗಿ, ತಮ್ಮಲ್ಲಿಗೆ ನನ್ನನ್ನು ಕರೆದರೂ.. ಇವರೊಡನೆ ಇಪ್ಪತ್ತುವರ್ಷ ಬಾಳಿದ ನೆನಪುಗಳ ಹೊತ್ತ ಈ ಸ್ವಂತ ಮನೆಯ ತ್ಯಜಿಸಲು ಯಾಕೋ ಮನಸ್ಸಿಲ್ಲ.....
ಅಪ್ಪ-ಅಮ್ಮರೇ ಅಣ್ಣ ಅತ್ತಿಗೆಯರ ಆಡಳಿತದ ನಡುವೆ, ತವರಲ್ಲಿ ನೇಪಥ್ಯವಾಗಿರುವಾಗ ಅಲ್ಲದೇ ಇಷ್ಟು ದಿನ ಅದನ್ನು ಬಯಸದೆ ಇದ್ದುದು... ಇಂದು ಅದನ್ನು ಆಸರೆ ಎ೦ದು ಕಲ್ಪಿಸಲಾಗದು.....

ದೀಪ ನೋಡುತ್ತಾ ಕುಳಿತಿದ್ದ ಅನ್ನಪೂರ್ಣಾ ಒಮ್ಮೆ ಕಣ್ಣು ತಿರುಗಿಸಿ.... ಸುತ್ತೆಲ್ಲಾ ನೋಡಿದಾಗ,
ಕತ್ತಲು ಅಡರಿದ೦ತೆಸಿತು...ಸೂರ್ಯ ಸಂಪೂರ್ಣ ಮರೆಯಾಗಿ ಸಂಜೆ ದಾಟಿ ಕತ್ತಲು ಎಲ್ಲೆಡೆ ಹಾಸಿತ್ತು ..
ಒಮ್ಮೆ ಭಯವು ಎನಿಸಹತ್ತಿತು....

.............ಹೀಗೆ ಅನ್ನಪೂರ್ಣಾಳ ಮನ, ಭೂತ-ವರ್ತಮಾನ-ಭವಿಷ್ಯತ್ತುಗಳ ಯೋಚನೆಯಲ್ಲಿ, ಗತಿಸಿದ ಗಂಡ ಅನುರಾಗನ ನೆನಪಲ್ಲಿ- ಅಂಗಳದಲ್ಲಿ ಹಚ್ಚಿಟ್ಟ ಹಣತೆಯ ಜ್ಯೋತಿಯಲ್ಲಿ , ಎವೆಯಿಕ್ಕದೆ ನೆಟ್ಟ ನೋಟದಲ್ಲಿ.... ಗರ ಗರ ತಿರುಗುತ್ತಿತ್ತು....



-೧-
ಕತ್ತಲಿನ ಭಯದಲ್ಲಿಯೇ ಅನ್ನಪೂರ್ಣ ಬೆಳುಕು ಚೆಲ್ಲುತ್ತಿದ್ದ ದೀಪವನ್ನು ಮತ್ತೆ ತದೇಕ ಚಿತ್ತವಾಗಿ ನೋಡಲಾರ೦ಭಿಸಿದಳು....ದೀಪದಲ್ಲಿನ ಬೆಳಕು ಈಗ ಮೆಲ್ಲ ಮೆಲ್ಲ ಸುತ್ತಾ ಹರಡುತ್ತಾ ಕತ್ತಲನ್ನು ನು೦ಗುತ್ತಿದ್ದ೦ತೆನಿಸಿತು...
ಆಶೆ ಬೆಳಕಾಗಿ ಚೆಲ್ಲುತ್ತಿದೆ ಎನಿಸುತ್ತಲೇ...
ಮನ ಮತ್ತೆ ವಿಚಾರಕ್ಕೆ ತಿರುಗಹತ್ತಿತು...


ನೆನಪಿನ ಸರಣಿ ಮತ್ತೆ ಮುಂದು ವರೆಯಿತು.....


"ಅನ್ನು ನೀನೇಕೆ ಕೆಲಸಕ್ಕೆ ಸೇರಬಾರದು "
"ಏಕೆ ಅನು ನೀನು ದುಡಿಯುತ್ತಿರುವದು ನಮ್ಮಿಬ್ಬರಿಗೆ ಸಾಲದೇ?"
"ಹಾಗಲ್ಲ ಅನ್ನು ನಿನಗೂ ಹೊರ ಪ್ರಪಂಚದ ಸಂಪರ್ಕವಿರಬೇಕು ... ಸಾಮಾಜಿಕ ಸಂಪರ್ಕ ಒಳ್ಳೆಯದು ... ಜೊತೆಗೆ ಆರ್ಥಿಕ ಸ್ವಾಯುತ್ತತೆ ಹೆಣ್ಣಿಗೆ ಅವಶ್ಯ ಸಹಾ.....ಗಂಡನಿಗೆ ಪೂರ್ತಿ ಅಲವತ್ತಿಕೊಂಡ ಜೀವನ... ಮುಂದೆ... ನಾನೇನಾದರೂ ನಿನ್ನ ಒಂಟಿ ಬಿಟ್ಟು ಹೋಗಬೇಕಾದ..."
"ಛೀ ಬಿಡ್ತು ಎನ್ನಿ... ನಿಮಗೂ ಏನಾಗೊಲ್ಲ..... ನನಗೂ ಏನಾಗೊಲ್ಲ.....ನನಗೆ ಯಾವ ಸಾಮಾಜಿಕ ಸಂಪರ್ಕವು ಬೇಡ.. ಆರ್ಥಿಕ ಸ್ವಾಯುತ್ತತೆಯು ಬೇಡ.... ನೀವಿದ್ದರೆ ಅಷ್ಟೆ ಸಾಕು..." ಎಂದು ಅವನ ಬಾಯಲ್ಲಿ ಕೈ ಇಟ್ಟು ನುಡಿದ್ದದ್ದು ನೆನಪಿಗೆ ಸಳ್ಳೇ೦ದು ಬಂತು....
ಅಂದು ಅವನ ಮಾತು ಕೇಳಿ ಕೆಲಸಕ್ಕೆ ಸೇರಿದ್ದರೆ... ಕೆಲಸದ ನಡುವೆ... ಮಿತ್ರರ ಸಂಪರ್ಕದ ನಡುವೆ ....
ಇಂದಿನ ಅವನ ಅಗಲಿಕೆಯಲ್ಲಿನ ಈ ಒಂಟಿತನ ಇಷ್ಟೊಂದು ಕಾಡುತ್ತಿರಲಿಲ್ಲವೇನೋ ಎನಿಸಿತು......
ಇಗಲೂ ಕಾಲ ಮಿಂಚಿಲ್ಲ.... ಇನ್ನು ಮುಂದೆಯೂ... ಕೆಲಸಕ್ಕೆ ಸೇರಿ ಅವರ ಮನಸ್ಸಿನಂತೆ ನಡೆದು ಈ ಒಂಟಿತನದ ಹಾದಿಯನ್ನು ಮರೆಯಬಹುದು......ಎನ್ನಿಸಹತ್ತಿತು..
ಮೊನ್ನೆ ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಇವರ ಮೇಲಧಿಕಾರಿ ಕಿರಣ ದಂಪತಿಗಳು- ಅನುರಾಗನನ್ನು ಕೊಂಡಾಡುತ್ತಾ..." ಮೇಡಂ.. ನೀವು ಕೆಲಸಕ್ಕೆ ಸೇರಿ.. ನಿಮ್ಮ ದುಖ ಮರೆಯಲು ಇದು ಒಂದು ದಾರಿ... ಜೊತೆಗೆ ಸ್ವಲ್ಪ ಸಂಪಾದನೆಯು ಆಗುತ್ತೆ... ಯೋಚಿಸಿ ... ನಿಮಗೆ ನನ್ನ ಸಲಹೆ ಸೂಕ್ತ ಎನಿಸಿದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ " ಎಂದದ್ದು ನೆನಪಿಗೆ ಸುಳಿಯಿತು..
ಕಿರಣ ದಂಪತಿಗಳನ್ನೂ ಅನು ಸದಾ ಹೊಗಳುತ್ತಿದ್ದುದು.. ಮತ್ತು ಅವರ ಸಹಾಯದ ಗುಣವನ್ನೂ
ಕೊಂಡಾಡುತ್ತಿದ್ದು... ಆ ಕ್ಷಣ ನೆನಪಾಗಿತ್ತು...
ತಾನು ಕೆಲಸಕ್ಕೆ ಸೇರಬೇಕು ಎನ್ನುವ ತುಡಿತ ಬಲವಾಗತೊಡಗಿತು....
ತಾನು ಕೆಲಸಕ್ಕೆ ಸೇರಿದರೆ ಅತ್ತೆ -ಮಾವ ಸಹಿತ ಖಂಡಿತ ಬಂದು ಜೊತೆಯಲ್ಲಿರುತ್ತಾರೆ....

-೨-
ಅನಾಥ ಮಗುವನ್ನು ದತ್ತು ತೆಗೆದುಕೊಂಡಿದ್ದರೆ??....
ಎಂಬ ವಿಷಯ ತಲೆಗೆ ಬಂದದ್ದನ್ನು ಮತ್ತೆ ನೆನಸುತ್ತಲೇ ಅನ್ನಪೂರ್ಣಾಳ ಮನ ಮತ್ತೆ ಯೋಚಿಸತೊಡಗಿತು....
ಅನಾಥ ಮಗುವನ್ನು ಇಗಲೂ ತಂದು ಸಾಕಬಹುದು...
ಇವರು ಮಾಡಿದ ಆಸ್ತಿಯಲ್ಲಿ ಮಗುವೊಂದನ್ನು ಸಾಕಿ ಸಲುಹಬಹುದೆನಿಸಹತ್ತಿತು..
ಆ ಮಗುವ ಲಾಲನೆ-ಪಾಲನೆಯಲ್ಲಿ ...ಒಂಟಿತನದ ಮುಂದಿನ ಬದುಕು ಸ್ವಲ್ಪ ಹಗುರವಾಗಬಹುದು....
ನಲವತ್ತರ ನಾನು ಅರವತ್ತಾಗುವಲ್ಲಿ ಮಗು ಇಪ್ಪತ್ತರದ್ದಾಗಿ ನನ್ನ ಮುದಿಕಾಲಕ್ಕೆ ಆಸರವಾಗಲೂಬಹುದು....
ಅತ್ತೆಮಾವರ ಜೊತೆ ಮಗುವ ಲಾಲನೆ ಪಾಲನೆಗೇ ಜೊತೆಯೂ ಆಗಬಹುದ೦ತೆನಿಸಿ ಮನ ಮುದವಾದ೦ತೆನಿಸಿತು...
ದೀಪದ ಬೆಳಕಲ್ಲಿ ಈಗ ಕತ್ತಲೆ ಕಡಿಮೆಯಾಗುತ್ತಿದೆ ಎನಿಸಹತ್ತಿತ್ತು....

-೩-
ಮತ್ತೆ ಯೋಚನೆ ಭೂತಕ್ಕೆ ತಿರುಗಿತು.....
ಅಂದು ಮನೆಯಿಂದ ದೂರದಲ್ಲಿ ..ಇಬ್ಬರು ಸಂಜೆ ವಿಹಾರಕ್ಕೆ ಮನೆಯ ದೂರದಲ್ಲಿರುವ ಉದ್ಯಾನವನದಲ್ಲಿ ತಿರುಗುತ್ತಿದ್ದಾಗ ವೃಧ್ದರ ತಂಡವೊಂದು ಮೋಜಿನಿಂದ ಆಟವಾಡುತ್ತಿದ್ದರು...... ಮಧ್ಯವಯಸ್ಕ ದಂಪತಿಗಳು ಅವರೊಡನೆ ಮೋಜಿನಲ್ಲಿ ನಿರತರಾಗಿದ್ದು ಅವರನ್ನೆಲ್ಲಾ ಆಟಕ್ಕೆ ಹುರಿದು೦ಬಿಸುತ್ತಿದ್ದು ಕಂಡಿತು....
"ಅನು ಇವರೆಲ್ಲಾ ಯಾರು"
" ಅನ್ನು ಆ ದಂಪತಿಗಳು ಪಕ್ಕದ ಕಾರ್ಖಾನೆ ಮಾಲೀಕರು...ನಮ್ಮ ಹಾಗೆ ಮಕ್ಕಳಿಲ್ಲ... ಅವರು ಒಂದು ವ್ರುಧ್ಧಾಶ್ರಮ ನಡೆಸುತ್ತಿದ್ದಾರೆ.. ವಾರಾ೦ತ್ಯದಲ್ಲಿ ಅವರು ಎಲ್ಲರೊಡನೆ ಸೇರಿ ಸಮಯ ಕಳೆಯುತ್ತಾರೆ... ಕೆಲವೊಮ್ಮೆ .... ಹೀಗೇ ಹೊರ ಪ್ರವಾಸಕ್ಕೂ ಬರುತ್ತಾರೆ..."
"ಹೌದಾ!!...ನಿಜಕ್ಕೂ ಒಳ್ಳೆ ಕೆಲಸ"
" ಹೌದು ಅನ್ನು ನಾವು ಒಂದಿಷ್ಟು ಹಣ ಮಾಡಿದ ಮೇಲೆ ಹೀಗೆ ಒಂದು ವ್ರುಧ್ಧಾಶ್ರಮಕ್ಕೆ ಸೇರಿ ಬಿಡುವಾ....ಮುಪ್ಪಲ್ಲಿ ಎಲ್ಲರೊಡನೆ ಹೀಗೆ ಇರುವದು ಮಜವಲ್ಲವೇ...."
"ಹೌದು.. ನಿಜ ಅನು... ಇಗಲೇ ಸೇರಿ ಬಿಡುವಾ ಈಗ ಅವರ ಸೇವೆ ಮಾಡುತ್ತಾ ಇರುವಾ...ಮುಪ್ಪಲ್ಲಿ ನಮಗೆ ಯಾರೋ ಆಸರೆ ಆಗುತ್ತಾರೆ..ಅಲ್ಲವಾ..."
ಅಂದು ಹೇಳಿದ್ದು ಪೂರ್ತಿಗ೦ಭೀರವಾಗಿಲ್ಲದಿದ್ದರೂ ಮನದ ಮೂಲೆಯಲ್ಲೇನೋ ತುಡಿತವಿದ್ದಿರಬಹುದಿತ್ತು ಎಂದು ಇಂದು ಅನ್ನಿಸುತಿದೆ .....
ಗಂಡ ಸಂಪಾದಿಸಿದ ಹಣದಲ್ಲಿ ಅದನ್ನು ಇಂದು ಸಾಕಾರಮಾಡಿಕೊಳ್ಳಬಹುದೆನಿಸಹತ್ತಿತು....
ಜೊತೆಗೆ ತಾನು ಕೆಲಸ ಮಾಡುತ್ತಿದ್ದರೆ .......
ಆ ಹಣದಿಂದ ಇನ್ನೂ ಹೆಚ್ಚಿನ ಸಾರ್ಥಕತೆ ಇಂತಹುವುಗಳಲ್ಲಿ ತೊಡಗುವದರಿಂದ ಹೊಂದಬಹುದಲ್ಲವೇ.....
ಬೆಳಸಿದ ಮಕ್ಕಳು ಮುಪ್ಪಿನಲ್ಲಿ ನೋಡದಿದ್ದರೂ.. ಇ೦ತಹ ಕಾರ್ಯಗಳು ಮುಂದೊ೦ದು ದಿನ ಬದುಕಿಗೆ ಆಸರೆಯಾಗಬಹುದಲ್ಲವೇ...

ಈಗ ದೀಪದ ಬೆಳಕು ಮನೆಯಲ್ಲಿನ ಕತ್ತಲೆ ಓಡಿಸಿದ೦ತೆನಿಸಹತ್ತಿತ್ತು.....

-೪-
ಕತ್ತಲ ಬಗ್ಗೆ ಯೋಚಿಸುವಾಗ ಅನುಗೆ ಆ ಘಟನೆ ನೆನಪಾಗದೆ ಇರದು.....
ಅಂದು ಸಂಜೆ ಭಾರೀ ಗುಡುಗು... ಸಿಡಿಲು.....
ಅನು ಅಂದು ಆಫಿಸಿನಿಂದ ಇನ್ನು ಬಂದಿರಲಿಲ್ಲ.....
ಗಾಳಿ ಮಳೆ ಗುಡುಗು ಸಿಡಿಲು ಜೋರಾಗಿ..... ವಿಧ್ಯುತ್ ಪೂರೈಕೆ ನಿ೦ತಿತ್ತು... ಮನೆಯಲ್ಲಿ ಕತ್ತಲು ಗವ್ವೆನಿಸಹತ್ತಿತು... ಸ೦ಜೆ ರಾತ್ರಿಗೆ ಸರಿದು ...ಅನು ಇನ್ನು ಬರದೆ...ಅವನ ಫೋನ್ ಇರದೇ.... ಮನವನ್ನ ಭಯವಾವರಿಸಿತ್ತು....ಮೇಣಬತ್ತಿ ಹಚ್ಚಲು ತಡಕಾಡಿ ಸಿಗದೇ ದೇವರ ಮನೆಯ ದೀಪದಲ್ಲಿಯೇ ಕುಳಿತಿದ್ದಳು... ಹೆದರಿ ಮುದ್ದೆಯಾಗಿದ್ದಳು ಅನ್ನಪೂರ್ಣಾ..
ಬಾಗಿಲು ತಡಬಡ ಬಡೆದ ಶಬ್ದಕ್ಕೆ ಭಯದಿಂದಲೇ ದೇವರ ಮನೆಯಿಂದ ಹೊರಟುಬಂದು .. ಭಯದಿಂದಲೇ ಅನುವೇ ಬಂದದ್ದು ಎಂದು ಕೇಳಿ ಖಚಿತಪಡಿಸಿಕೊಂಡು ಬಾಗಿಲು ತೆರೆದಿದ್ದ ಅವಳು ಅನುವನ್ನ ನೋಡುತ್ತಲೇ ...ಅವನನ್ನು ಜೋರಾಗಿ ಆಪ್ಪಿ ಅಳುತ್ತಾ..
" ಅನು ಏಕೆ ತಡ? ಫೋನ್ ಏಕೆ ಮಾಡಲಿಲ್ಲ? ಮನೆಯೆಲ್ಲಾ ಕತ್ತಲು ...ಮಳೆ... ಗುಡುಗು... ಸಿಡಿಲು.. ಮಿಂಚು... ನನಗೆ ಎಷ್ಟು ಭಯ ಆಗಿತ್ತು ಗೊತ್ತಾ???"
ಅವಳನ್ನು ಒಂದು ಕೈಯಲ್ಲಿ ಬಳಸಿ ಜೋರಾಗಿ ಅಪ್ಪಿ, ಇನ್ನೊಂದು ಕೈಯಲ್ಲಿ ತಲೆ ನೇವರಿಸುತ್ತಾ.. "ಅನ್ನು ಹೀಗೆ ಭಯ ಪಟ್ಟರೆ ಹೇಗೆ ಆಫೀಸಿನಿಂದ ಹೊರಟ ನನಗೆ.. ಬಸ್ಸ ಸಿಗದೇ... ಆಟೋ ಸಿಗದೇ... ಮೊಬೈಲ್ ಸಂಪರ್ಕ ಬಂದ ಆಗಿ... ಯಾರದೋ ಕಾರಲ್ಲಿ ಸಹಾಯ ಪಡೆದು ಇಲ್ಲಿಗೆ ಬಂದೆ.. ಕ್ಷಮಿಸು... ಆದರೆ ನೀನು ಹೀಗೆ ಹೆದರಿದರೆ ಹೇಗೆ .... ನಾನೆ ಇಲ್ಲವಾದರೆ ಇನ್ನು ಹೇಗೆ ?...."
ಅವನ ಬಾಯಿಗೆ ಕೈ ಇಟ್ಟು " ಛೀ ಹಾಗೆ ಹೇಳಬೇಡಿ" ಎಂದಳು.
" ಅನ್ನು ಹೀಗೆ ಹೆದರಿದರೆ ಹೇಗೆ... ಬದುಕನ್ನು ಎದುರಿಸಬೇಕು... ಎಂಥ ಕತ್ತಲು ಬಂದರು ಮೆಟ್ಟಿ ನಿಲ್ಲುವ ಛಲವಿರಬೇಕು... ನಾನಿಲ್ಲ ಎಂದರು ನೀನು ಬಾಳಿ ತೋರಿಸಬೇಕು... ಹೀಗೆ ಎದೆಗು೦ದಬಾರದು..." ಎಂದೆಲ್ಲಾ ಸಂತೈಸಿದ್ದು ನೆನಪಿಗೆ ಬರಹತ್ತಿತ್ತು....


ಆ ಮಾತೆಲ್ಲಾ ನೆನಪಾದಂತೆ ಅನ್ನಪೂರ್ಣಾಳ ಮನ ಗಟ್ಟಿಯಾದ೦ತೆನಿಸಿತು... ದೀಪದ ಬೆಳಕು ಪ್ರಖರವಾಗಿ... ಮನೆಯ ಕತ್ತಲು... ಮನದ ಭಯವು...ಇಲ್ಲವಾದ೦ತೆನಿಸಿ ಮುಂದಿನ ದಾರಿ ಸ್ಪಷ್ಟವೆನಿಸತೊಡಗಿತು...


......ಮುಕ್ತಾಯ ಅಲ್ಲ ಪ್ರಾರ೦ಭ........

ಅನ್ನಪೂರ್ಣಳ ಮನ ಈಗ ದೀಪದ ಜ್ಯೋತಿಯಲ್ಲಿ ಬೆಳಕಾಗಿತ್ತು... ಮನೆ-ಮನದಲ್ಲಿ ಆವರಿಸಿದ್ದ ಕತ್ತಲೆ ಓಡಿ ಹೋದ೦ತೆನಿಸಿತು....
ಅವಳ ನಿರ್ಧಾರ ಗಟ್ಟಿಯಾಗಿತ್ತು. ಬೆಳಿಗ್ಗೆ ಎದ್ದವಳೇ ಕಿರಣ ದಂಪತಿಗಳನ್ನು ಕಂಡು ಕೆಲಸವೊಂದಕ್ಕೆ ಸೇರುವದು...ಅತ್ತೆ-ಮಾವರನ್ನು ಜೊತೆಗೆ ಕರೆದುಕೊಂಡು ತ೦ದಿಟ್ಟುಕೊಳ್ಳುವದು... ಆಮೇಲೆ ಅವರೊಡನೆ ಅನಾಥಾಶ್ರಮಕ್ಕೆ ಹೋಗಿ ಮಗುವೊಂದನ್ನು ದತ್ತು ಪಡೆದು ಬೆಳೆಸುವದು...
ಸಮಯ ಸಿಕ್ಕಾಗ ವ್ರುಧ್ಧಾಶ್ರಮದಲ್ಲಿ ತನು -ಮನ-ಧನಗಳ ಸೇವೆ ಸಲ್ಲಿಸಿ ಬದುಕ ಸಾರ್ಥಕಪಡಿಸಿಕೊಳ್ಳುವ ಕಾಯಕಕ್ಕೆ ತೊಡುಗುವದು...
ಈಗ ಮನ ಶೂನ್ಯದಿ೦ದ ಪರಿಪೂರ್ಣದೆಡೆಗೆ ಸಾಗುತ್ತಿದೆ ಎನಿಸಹತ್ತಿತ್ತು..


ದೂರದಲ್ಲೆಲೋ ಸುಶ್ರಾ ವ್ಯವಾಗಿ ....


"ಸೂರ್ಯನಿಲ್ಲದಿದ್ದರೇನು ??
ಹಣತೆ ಬೆಳಕ ನೀಡದೇ.......?

ಜಗವ ಬೆಳಗದಿದ್ದರೇನು?
ಮನೆಯ ಬೆಳಗಲಾಗದೇ...?

ಮನಕೆ ಮನವು ಇಲ್ಲದಿದ್ದರೇನು?
ಮನವೇ ಮನಕೆ ಆಗದೆ?"

ತೇಲಿ ಬರುತ್ತಿದ್ದ ಹಾಡು ಮನಕ್ಕೆ ತಂಗಾಳಿಯ ಹಿತವನ್ನು ನೀಡುತ್ತಿತ್ತು......




Saturday, October 8, 2011

ಹಕ್ಕಿಗೆ ಚೆಲ್ಲಾಟ -ಚಿಟ್ಟೆಗೆ ಪ್ರಾಣ ಸಂಕಟ

(ಚಿತ್ರ ಕೃಪೆ - ಕೆ ಶಿವೂ -ಛಾಯಾ ಕನ್ನಡಿ ಅಂಕಣದ ಒಡೆಯರು )



ಅಷಿಪ್ರಿನಿಯಾದ ಹಸಿವೆಗೆ ಚಿಟ್ಟೆ ಸಿಕ್ಕಿತ್ತು......

ಹೊಂಚಿ ಹಾಕಿದ ಬೇಟೆ ತಿನ್ನೋ ಗಮ್ಮತ್ತು....

ತಪ್ಪಿಸಿ ಹಾರಲು ಅವಿರತದ ಹೋರಾಟ..
ಸುತ್ತಮುತ್ತೆಲ್ಲಾ ಚದುರಿದ್ದು ಬಣ್ಣ ಓಕುಳಿಯಾಟ...

ರೆಕ್ಕೆಗಂಟಿದ ವರ್ಣ ಹುಡಿಯಾ ಚೆಲ್ಲಾಟ...
ತಂದಿತ್ತುದು ಪ್ರಾಣ ಸಂಕಟ....

ದೂರದಲ್ಲೆಲೋ ಕ್ಯಾಮರ ಕಣ್ಣಿನ ನೋಟ....
ಜುಮಾಯಿಸಿ ತೆಗೆದುದು ವರ್ಣ ಪಟ....

ನನ್ನ ಪ್ರಾಣದ ಜೊತೆಯಾಟ.....
ಒಬ್ಬರಿಗೆ ಹಬ್ಬದೂಟ...
ಇನ್ನೊಬ್ಬರಿಗೆ ಬಹುಮಾನಕ್ಕೆ ಚಿತ್ರಪಟ....
ನೋಡಿ ವಾ ಎನ್ನುವ ಕಂಗಳಿಗೆ ರಸದೂಟ....
ಕೆಲವು ಕವಿಗಳ ಕಾವ್ಯಕ್ಕೆ ಸ್ಫೂರ್ತಿಯ ಪಟ ....

Tuesday, October 4, 2011

ಕಥೆ........ ಕಥೆಯ೦ತಿಲ್ಲ! ಕಥೆಯೊಂದು ಜೀವನ


ಆತ ...

ಮುಖ ತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...


ನನಗೂ.. ಅಸಾಧ್ಯ ಕೋಪ ಬಂತು..


ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...
(ಇಲ್ಲಿಗೆ ಮುಗಿದ ಇಟ್ಟಿಗೆ ಸಿಮೆಂಟಿನ ಪ್ರಕಾಶರ ಕಥೆ "ನೀತಿ" ಯ ಮುಂದುವರೆದ ಭಾಗ ಕೊಂಡಿ: http://ittigecement.blogspot.com/2011/09/blog-post.html


ಆತ...

ಅಬ್ಬಾ ಎಷ್ಟೊಂದು ಅನುಮಾನ ಇವಳಿಗೆ

ಇಂದು ಮೊದಲ ರಾತ್ರಿಯೇ ಹೀಗೆ
ಆದರೆ ಇನ್ನು ಜೀವನ ಪರ್ಯಂತರ ಹೇಗೆ?
"ಆದರೆ ಹೇಗೆ ನಂಬಲಿ" ಎಂದರೆ... ನಾನೇನು ಹೇಳಬೇಕಿತ್ತು...??
ನಾನು ಮಾಡಿದ್ದೆ ಸರೀ!
ಒಮ್ಮೆಲೆ ಮೊದಲ ರಾತ್ರಿ ನಾನು ಅದು ಇದು ನೇರ ಅಂಥಾ ಎಲ್ಲವನ್ನೂ ಒಮ್ಮೆ ಹೇಳಿದ್ದೆ ತಪ್ಪಾಯಿತು .....ಸ್ವಲ್ಪ ಸಮಯದ ನಂತರ ಹೇಳಬಹುದಿತ್ತು... ಹೇಳದೆ ಮುಚ್ಚಿಟ್ಟಿದ್ದಾರೆ ಏನಾಗುತ್ತಿತ್ತು...??? ಸುಮ್ಮನೆ ನೆರವೆಂದು ಎಲ್ಲವನ್ನೂ ಬಿಚ್ಚಿಟ್ಟು ಅನುಮಾನಕ್ಕೆಡೆ ಮಾಡಿಸಿದೆನಲ್ಲಾ ...ಹೋಗಲಿ ಅಷ್ಟಕ್ಕೂ ಅನುಮಾನಪಟ್ಟಿದ್ದು ಅವಳು... ಅದಕ್ಕೆ ಸಿಟ್ಟು ಬಂದು ನಾನು ತಿರುಗಿದೆ... ಅಬ್ಬಾ.. ಅದಕ್ಕೆ ತಾನೂ ತಿರುಗಿ ಮಲಗಬೇಕೆ...? ಹೋಗಲಿ ಹೆಣ್ಣಿಗೆ ಹಠ ಎನ್ನುತ್ತಾರೆ ನಾನೆ ಒಮ್ಮೆ ಮಾತಾಡಿಸಲೇ... ಮಾತಾಡಿಸಿ ಸೋತು ...ಮೊದಲ ರಾತ್ರಿ ಗೆಲ್ಲಲೇ ????.....ಮೆಲ್ಲ ಅರೆ ನಿದ್ದೆಯಲ್ಲಿದ್ದ೦ತೆ ... ಕೈ ಅವಳ ಮೈ ಮೇಲೆ ಹಾಕಲೇ...ಗಂಡಿಗೆ ಹೇಗಿದ್ದರೂ ಚಟ ವಲ್ಲವೇ? ಹಾಕಿ ಬಿಡುತ್ತೇನೆ.... ಇನ್ನು ಸಿಟ್ಟಿದ್ದರೆ ಕೈ ಬಿಸಾಕುತ್ತಾಳೆ ... ಇಲ್ಲಿದಿದ್ದರೆ ನಾನೆಂದು ಕೊಂಡ೦ತೆ ಮೊದಲ ರಾತ್ರಿ ಮಿಲನ ಮಹೋತ್ಸವ...



ಆಕೆ .....
"ನಾನೇಗೆ ನಂಬುವದು" ಎಂಬ ನನ್ನ ಪ್ರಶ್ನೆ ಅವರ ಅಸ್ತಿತ್ವವನ್ನೇ ಕೆಣಕುವ೦ತಿತ್ತಲ್ಲವೆ ??
ನಾನು ಅದನ್ನು ಕೇಳಬಾರದಿತ್ತು ...
ಪರಸ್ಪರರನ್ನು ನಂಬದೆ ಸಂಭಂಧ ಗಟ್ಟಿ ಮಾಡುವದು ಹೇಗೆ?...
ಅದು ಪ್ರಾರಂಭದಲ್ಲೇ...
ಅವರು ಆದನ್ನು ಹೇಳದೆ ಮುಚ್ಚಿಡಬಹುದಿತ್ತು...
ಹೇಳಿದ ಮೇಲೆ ಅದ್ದನ್ನು ನಾನು ನಂಬದೆ ಅನುಮಾನಿಸುವದು ತಪ್ಪು ನಾನು
ಅವರು ಹೇಳಿದ್ದರಲ್ಲಿ ಅರ್ಧವನ್ನೇ ನಂಬಿದೆ ಇನ್ನರ್ಧ ಅನುಮಾನಿಸಿದೆ...
ಅದನ್ನು ಅನುಮಾನಿಸಬಹುದಿತ್ತು...
ಇಲ್ಲ ಇದನ್ನು... ನ೦ಬಬಹುದಿತ್ತು...
ಹೆಣ್ಣಿಗೆ ಹಠ ಎನ್ನುವದು ಇವರಿಗೆ ಗೊತ್ತಿಲ್ಲವೇ/.... ಒಮ್ಮೆ ಅವರ ಕೈ ನನ್ನ ಮೇಲೆ ಬಿದ್ದರೆ ನಾನೆಲ್ಲಾ ಮರೆತು ಅವರನ್ನ ತಬ್ಬಿ ಬಿಡುತ್ತೇನೆ....

ನಿದ್ರೆಯಲ್ಲಿದ್ದಂತೆ ನಟಿಸುತ್ತಾ ಅವನು ಬದಿ ತಿರುಗಿಸಿ ಅವಳೆಡೇಗೆ ಮುಖ ಮಾಡಿ ತಿರುಗುತ್ತಾನೆ...

ಅವನು ತನ್ನ ಕಡೆ ತಿರುಗಿದ್ದು ಅವಳಿಗೆ ಅರಿವಾಗುತ್ತೆ...ನಿದ್ದೆಯಲ್ಲಿದ್ದಾನೋ...? ಅಥವಾ ಬೇಕಂತಲೇ ತಿರುಗಿರುವನೋ? ತಿರುಗಿ ನೋಡಲು ಕಾತರ... ಆದರೆ ನೇರ ನೋಡಲಾಗುವದಿಲ್ಲ... ಆದ್ದರಿಂದಲೇ ನಿದ್ರೆಯಲಿಂದಲೇ ಮೇಲ್ಮುಖಕ್ಕೆ ತಿರುಗಿ ನಿಮಿಲಿತ ನೇತ್ರದಲ್ಲಿ ಅವನನ್ನು ನೋಡುತ್ತಾಳೆ... ನಿದ್ರೆಯಲ್ಲಿದ್ದಂತೆ ನಟಿಸುತ್ತಿರುವದು ಗೊತ್ತಾಗುತ್ತೆ ....ಇರಲಿ ನೋಡೋಣ....ಗಂಡಿಗೆ ಚಟವಂತೆ... ಸರಿಯೇ ನೋಡೋಣ...
ಅವಳು ಮೇಲ್ಮುಖ ಮಾಡಿ ತಿರುಗಿದ್ದು ಇವನು ನಿಮಿಲಿತನಾಗೆ ಗಮನಿಸುತ್ತಾನೆ... ಅಬ್ಬ ಹೆಣ್ಣೇ ಇನ್ನು ಹಟವೇ? ಇರಲಿ ಮೆಲ್ಲ ಕೈ ಮೇಲೆ ಹಾಕುತ್ತೇನೆ ನೋಡೋಣ...ಕೈ ನಿದ್ರೆಯಲ್ಲಿ ಬಂದಂತೆ ಅವಳ ಮೇಲೆ ಬಳಸಿಯೂ ಬಳಸದಂತೆ ಇರಿಸಿದ...

ಕೈ ಬೀಳುತ್ತಲೇ ಇವಳು ಅವನೆಡೆಗೆ ನಿದ್ರೆಯಲ್ಲಿದ್ದಂತೆ ನಟಿಸುತ್ತಾ ಅವನೆಡೆಗೆ ಸರಿಯುತ್ತಾಳೆ... ಈಗ

ಈಗ ನಟನೆಯಲ್ಲಿ ಮುಚ್ಚಿದ ಇಬ್ಬರ ಕಣ್ಣುಗಳಲ್ಲಿ ಅಪಾರ ಆಶೆ ತುಂಬಿದೆ... ಪರಸ್ಪರರ ಮುಖಕ್ಕೆ ಪರಸ್ಪರರ ಬಿಸಿಯುಸಿರು ಬೀಸುತ್ತಿದೆ...ತಂಗಾಳಿಯಂತೆ..ಮಂದಾನಿಲದಂತೆ .... ಮಾರುತವಾಗಿ... ಅದರೊಡನೆ ಮನದ ಸುಪ್ತ ಬಯಕೆಗಳು ಹೊತ್ತಿ ಕಂಬಾರನ ತಿದಿಗೇ ಬೆದೆಯೋಡಿವ ಬೆಂಕಿಯಂತೆ ಹರಡಿ ಸುತ್ತೆಲ್ಲಾ ಮುತ್ತಿ, ಜಗಳ ಕದನಗಳ ಕಾರಣಗಳು ಗೌಣವಾಗಿ ಅದರಲ್ಲಿ ಸುಟ್ಟು ಕರಗಿತು ... ಕೇವಲ ಬಯಕೆ ಪ್ರೀತಿಯ ಬೆಂಕಿ ಹೊತ್ತೊಡೆದು ...ಪರಸ್ಪರರನ್ನು ಅಪ್ಪಿಸಿ ಮುತ್ತಾಡಿಸಿ ಮಿಲನಕ್ಕೆ ಮುಂದುವರೆಸುತ್ತದೆ... ಮುಚ್ಚಿದ ಕಂಗಳು ತೆರೆಯದೆ ಎಲ್ಲವನ್ನೂ ನೋಡಿ ಸವಿಯಿತು... ತೆಗೆದಾಗ ಕಾಣದ್ದು ಮುಚ್ಚಿದಾಗಲೇ ಕಂಡಿತು...ಕತ್ತಲು ಆಪ್ತವಾಯಿತು... ಬಯಕೆ ಮುಗಿಲ ಮುತ್ತಿಟ್ಟು ಮುತ್ತಿಕ್ಕಿ ... ಮೊದಲಿನ ಮಾತಿನ ಕದನ ಕಾಣದಾಗಿ ಈಗ ಇಲ್ಲಿ ಮಾತಿಲ್ಲದ ಪ್ರೇಮದ ಕದನ ಆರಂಭವಾಯಿತು ...ಒಬ್ಬರಲ್ಲಿ ಒಬ್ಬರು ಕಳೆದು ಹೋದರು....!

ಮಿಲನದ ಕದನದಲ್ಲಿ ಸುಸ್ತಾಗಿ ಅಪ್ಪಿ ವಿರಮಿಸಿದ ಪರಸ್ಪರ ಮೈ ಮನಗಳಲ್ಲಿ ಧನ್ಯತೆ ತುಂಬಿ ....
ಆತ "ಪುಟ್ಟಾಣಿ ನಾನು ತಿರುಗಿ ಮಲಗಿದ್ದು ತಪ್ಪು" ಎಂದ

ಅವಳು " ಪೋಲಿ ಕಿಟ್ಟಾಣಿ ಅನುಮಾನಿಸಿದ್ದು ನನ್ನ ತಪ್ಪು"

ಆಮೇಲೆ ಇಬ್ಬರು ಒಟ್ಟಿಗೆ ಅರಿವಿಲ್ಲದೆ ಅಂದಿದ್ದು "ಇರಲಿ ಬಿಡು ಅದೊಂದು ಕಹಿ ಕಾಲ -ಸುಖದಲ್ಲಿ ಅದೆನೇಕೆ ನೆನೆವ"

"ಹೆಣ್ಣಿಗೆ ಹಠ - ಗಂಡಿಗೆ ಚಟ " ಇದು ಸತ್ಯ.... ಇದರಲ್ಲಿ ಸಹಸ್ರಾರು ವಿಚ್ಚೆದನಕ್ಕೆ ಕಾರಣವಾಗಬಹುದಾದ ಘಟನೆಗಳು ಸತ್ತು ಮತ್ತು ಸುಟ್ಟು ಹೋಗಿವೆ....

ಅದಕ್ಕೆ ಹೇಳಿದ್ದು " ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ "