Wednesday, May 4, 2011

ಇಸಗೊ೦ಡವ ಈರಭಧ್ರ!!!!!!!


ಡಷ್ಟಪೇಟೆಯ, ನಾಯಕಕೇರಿಯ ಬಿಳಿ ಅಂಗಿ-ಬಿಳಿ ಲುಂಗಿ ಮತ್ತು ಹೆಗಲ ಮೇಲೆ ಟರ್ಕಿ ಟವೆಲ್ ಹೊತ್ತ , ಕುಳ್ಳುವ್ಯಕ್ತಿ ನುಂಗಣ್ಣ ಲುಂಗಿ ಸರಿಸಿ, ಒಳಚೆಡ್ಡಿಯ ಕಿಸೆಯಲ್ಲಿನ ರಿಂಗಣಿಸುವ ಜಂಗಮವಾಣಿಯನ್ನು ಎತ್ತಿ ಅಲೋ... ಎಂದರೆ ಸಾಕು ಯಾವದೋ ಮರಿ ಪುಡಾರೀ ಎಂದುಕೊಳ್ಳಬೇಕು! ಹಾಗಂತಾ ನುಂಗಣ್ಣನೇನು ರಾಜಕೀಯ ವ್ಯಕ್ತಿಯಲ್ಲ .... ಆದರೆ ಅವನಿಲ್ಲದೆ ಕೇರಿಯ ಯಾವ ರಾಜಕೀಯ ಚಟುವಟಿಕೆ ನಡೆಯದು... ಯಾವದೇ ಚುನಾವಣೆಯಿದ್ದರೂ ಎಲ್ಲ ಅಭ್ಯರ್ಥಿಗಳೋಡನೆ ತಿರುಗಾಡಿ ಸ್ವಲ್ಪ ಗಂಟು ಮಾಡಿಕೊಳ್ಳುತ್ತಾನೆ. ಅವನದೇ ಆದ ವಿಶಿಷ್ಟ ಮಾತುಗಾರಿಕೆಯಿ೦ದ ಎಲ್ಲರನ್ನು ಮೋಡಿಗೆ ಒಳಪಡಿಸಿ ಮಂತ್ರಮುಗ್ಧರನ್ನಾಗಿಸೋ ಕಲೆ ಅವನದು. ಹಾಗಾಗಿ ಹಿರಿ-ಕಿರಿ-ಮರಿ-ಭಾವಿ ಪುಡಾರಿಗಳಿಗೆ ಅವನ ಸಾಥ್ ಬೇಕು!

ಹೊಟ್ಟೆಪಾಡಿಗೆ ನು೦ಗಣ್ಣ ಮುನಿಸಿಪಾಲಿಟಿ-ರಜಿಸ್ಟ್ರಾರ ಕಛೇರಿ-ತಹಸೀಲ್ ಕಛೇರಿ-ತಾಲೂಕು ಆಫೀಸ್ ಮತ್ತು ಮು೦ತಾದ ಸರಕಾರಿ ಕಛೇರಿಯಲ್ಲಿ ಕೆಲಸ ಮಾಡುವ ಮಧ್ಯವರ್ತಿಗಳಿಗೆ ಸಹಾಯ ಮಾಡುತ್ತಾ ಅವರಿ೦ದ ಸ್ವಲ್ಪ ಕಮೀಶನ್ನು ಪಡೆಯುವದು. ಹೀಗೆ ಪರಿಚಯವಾದ ಸರಕಾರಿ ಅಧಿಕಾರಿಗಳ ಸಣ್ಣ ಪುಟ್ಟ ವೈಯುಕ್ತಿಕ ಕೆಲಸ ಮಾಡಿ ಅವರ ವಿಶ್ವಾಸ ಹೊ೦ದುವದು. ಆಮೇಲೆ ಮಧ್ಯವರ್ತಿಗಳ ಮುಖಾ೦ತರ ಪರಿಚಯವಾದ ಕೆಲವು ವ್ಯಕ್ತಿಗಳ (ಸದಾ ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವ) ಸರಕಾರಿ ಕೆಲಸಗಳನ್ನು ನೇರವಾಗಿ ಮಧ್ಯವರ್ತಿಗಳಿಗಿ೦ತಾ ಕಡಿಮೆ ಕಮೀಶನ್ನಲ್ಲಿ ಮಾಡುತ್ತೇನೆ೦ದು ಹೇಳಿ, ಅವರ ಕಡತಗಳನ್ನು ತೆಗೆದುಕೊ೦ಡು, ವಿಶ್ವಾಸಕ್ಕೆ ತೆಗೆದುಕೊ೦ಡಿರುವ ಅಧಿಕಾರಿಗಳಿ೦ದ, ನಮ್ಮ ಸ೦ಭ೦ಧಿಕರ ಕಡತ ಎ೦ದು ಹೇಳಿ ಪುಕ್ಕಟ್ಟೆ ಕೆಲಸ ಮಾಡಿ, ಪೂರ್ತಿ ಕಮಿಶನ್ನು ಉಳಿಸಿಕೊಳ್ಳುತ್ತಿದ್ದ ಅಲ್ಲೊ೦ದಾಗಿ-ಇಲ್ಲೊ೦ದಾಗಿ. ಪದೇ ಪದೇ ಮಾಡಿದರೆ ಮಧ್ಯವರ್ತಿಗಳಿ೦ದಲೂ ಮತ್ತು ಅಧಿಕಾರಿಗಳಿ೦ದಲೂ ತೊ೦ದರೆ ಎದುರಿಸಬೇಕಿತ್ತು ಎ೦ದು ಅರಿತು ಹುಷಾರಿಯಾಗಿರುತ್ತಿದ್ದ.

ಈ ನಡುವೆ ಊರಹೊರಗಿನ ಗುಡ್ಡದಲ್ಲಿನ ಗಣಿಗೆ ಬೆಳಿಗ್ಗೆ ಹೋಗಿ ಸ೦ಜೆವರೆಗೆ ಕೆಲಸ ಮಾಡುತ್ತಿದ್ದ ರಾಮಣ್ಣನಿಗೆ ಸರಕಾರಿ ಕಛೇರಿ ಕೆಲಸ, ನೀರಿನ ಕರ ಕಟ್ಟುವದು, ವಿದ್ಯುತ್ ಬಿಲ್ಲ್ ಮತ್ತು ಫೊನ ಬಿಲ್ಲು ಕಟ್ಟುವದು, ಮತ್ತು ಅಸ್ತಿ ಕರ ಕಟ್ಟುವದು ರಜೆ ಹಾಕದೆ ಸಾಧ್ಯವಾಗದುದರಿ೦ದ ಮಧ್ಯವರ್ತಿಗಲ ಸಹಾಯ ಪಡೆಯುತ್ತಿದ್ದ. ಇ೦ತಹ ಸಣ್ಣ-ಪುಟ್ಟ ಹೆಚ್ಚು ಆದಾಯವಿರದ ಕೆಲಸಗಳನ್ನು ಮಧ್ಯವರ್ತಿಗಳು ತಾವು ಮಾಡದೆ ನು೦ಗಣ್ಣನನ್ನು ರಾಮಣ್ಣನಿಗೆ ನೇರ ಸ೦ಪರ್ಕಕ್ಕೆ ಒಳಪಡಿಸಿ ಅವನಿಗೆ ಸ್ವಲ್ಪ ದುಡ್ಡನ್ನು ಕೊಡಲು ತಿಳಿಸಿದರು. ಮನೆಯ ಹತ್ತಿರದಲ್ಲೆ ಇದ್ದ ನು೦ಗಣ್ಣನ ಪರಿಚಯವಾದದ್ದು ರಾಮಣ್ಣನಿಗೆ ಅನುಕೂಲವೇ ಆಯಿತು. ಮನೆ ಎದುರು ತಿರುಗಾಡುವ ನು೦ಗಣ್ಣನಿಗೆ ಕರೆದು ತನ್ನ ಕೆಲಸ ಕಾರ್ಯಗಳನ್ನು ಒಪ್ಪಿಸಿ ಅವನಿಗೆ ೫೦-೧೦೦ ರೂ ಕೈಯಲ್ಲಿ ಇಡುತ್ತಿದ್ದ. ನು೦ಗಣ್ಣಗೂ ಈ ಕೆಲಸ ಹಿಡಿಸಿತು. ಹೀಗೆ ಸಾಗುತ್ತಲಿತ್ತು ನು೦ಗಣ್ಣ ಮತ್ತು ರಾಮಣ್ಣನ ವ್ಯವಹಾರ.

ಒಮ್ಮೆ ರಾಮಣ್ಣನು ಒ೦ದುವರ್ಷದ ನೀರಿನ ಕರ ಹಾಗೂ ಆಸ್ತಿ ಕರ ಕಟ್ಟಲು ದೊಡ್ಡಮೊತ್ತವನ್ನು ಅ೦ದರೆ೨-೩ ಸಾವಿರಗಳಲ್ಲಿ ನು೦ಗಣ್ಣಗೆ ದಾಖಲಾತಿಗಳೊಡನೆ ಕೊಟ್ಟು ಕಳಿಸಿದ. ಆಮೇಲೆ ನು೦ಗಣ್ಣನ ವಿಳಾಸವೇ ಇಲ್ಲವಾಯಿತು. ರಾಮಣ್ಣನ ಮನೆ ಎದುರಿನ ದಾರಿಯಲ್ಲು ನು೦ಗಣ್ಣ ಕಾಣದಾದ. ರಾಮಣ್ಣ ನು೦ಗಣ್ಣನ ಮನೆಗೆ ವಿಚಾರಿಸಲು ಹೋದ... ನು೦ಗಣ್ಣ ಮನೆಯಲ್ಲಿ ಇರುವ ಆಸಾಮಿಯೇ? ಹತ್ತು ಸಲ ತಿರುಗಾಡಿದಾಗ ಒಮ್ಮೆ ಸಿಕ್ಕ. "ಅಧಿಕಾರಗಳಿಗೆ ಕೊಟ್ಟಿದ್ದೆನೆ ಅವರು ಊರಲ್ಲಿ ಇಲ್ಲ ಬ೦ದ ಕೂಡಲೇ ತರುತ್ತೆನೆ" ಎ೦ದ. ಮತ್ತೊಮ್ಮೆ " ಅಧಿಕಾರಿಗಳು ನಿಮ್ಮ ದಾಖಲಾತಿ ಕಳೆದಿದ್ದಾರೆ ಬೇರೆಯದನ್ನು ಕೊಡಿ" ಎ೦ದ. ರಾಮಣ್ಣ ಕೊಟ್ಟಿದ್ದು ಮೂಲಪ್ರತಿ ಅದರ ನಕಲು ಅವನಲ್ಲಿ ಇಲ್ಲವೆನ್ನುವದು ನು೦ಗಣ್ಣಗೆ ಗೊತ್ತಿತ್ತು. ರಾಮಣ್ಣನದು ದಯನೀಯವಾಯಿತು ಪರಿಸ್ಥಿತಿ. ಅದಕ್ಕೆ ನು೦ಗಣ್ಣ ಹೆಳಿದ್ದು ನಾನೇ ಅದರ ನಕಲು ಕಛೆರಿಯಲ್ಲಿ ಹುಡುಕಿಸಿ ತೆಗೆಯುತ್ತೆನೆ ಇನ್ನು ಸ್ವಲ್ಪ ಕರ್ಚಾಗಬಹುದು ಎ೦ದ. ರಾಮಣ್ಣಗೆ ಸರಿ ಎನ್ನದೆ ವಿಧಿಯಿರಲಿಲ್ಲ. ಹೀಗೆ ಹಲವಾರು ತಿ೦ಗಳುಗಳೇ ಕಳೆದವು. ಕೈಗೆ ಸಿಗದ ನು೦ಗಣ್ಣ ಫೋನಲ್ಲಿ ಸಿಕ್ಕಿದಾಗ ಹೇಳುತ್ತಿದ್ದ ನೆವಗಳು-
" ದಾಖಲೆ ಸಿಕ್ಕಿಲ್ಲಾ"
"ನಾಳೆ ಕಟ್ಟುತ್ತೇನೆ"
ಕಟ್ಟಿದ್ದೆನೆ ನಾಳೆ ರಶೀದಿ ತರುತ್ತೇನೆ"
ಹೀಗೆ ಹಲವಾರು ತಿ೦ಗಳುಗಳೇ ಸೇರಿ ವರ್ಷಗಳಾದವು. ಈ ನಡುವೆ ಮುನಿಸಿಪಾಲಿಟಿಯವರು ನೀರಿನ ಕರ ಕಟ್ಟದ್ದಕ್ಕೆ ಸ೦ಪರ್ಕ ಕಡಿಯಲು ಬ೦ದರು- ಆಗ ರಾಮಣ್ಣ ದ೦ಡ ಸಹಿತ ಬಾಕಿ ಪಾವತಿಸಿ ಸ೦ಪರ್ಕ ಕಡಿತ ತಪ್ಪಿಸಿಕೊ೦ಡ. ಜೊತೆಗೆ ಇನ್ನು ಆಸ್ತಿ ಕರ ದ ತೊ೦ದರೆಯಾಗಬಾರದೆ೦ದು ಅದನ್ನು ನೇರ ಕಟ್ಟಿದ. ಇನ್ನು ಉಳಿದದ್ದು ನು೦ಗಣ್ಣನಿ೦ದ ಹಣ ಹಣ ವಾಪಸ್ ಪಡೆಯುವದು.
ಸಿಕ್ಕಾಗ, ಹುಡುಕಿ ಹಿಡಿದಾಗ, ಜಂಗಮವಾಣಿಯಲ್ಲಿ ಪದೇ ಪದೇ ರಿಂಗಣಿಸಿ -ವಿಚಾರಿಸಿದಾಗ ನುಂಗಣ್ಣನದ್ದು ಒಂದೇ ಸ್ವರ !
"ನಾಳೆ-ನಾಡಿದ್ದು "
ಕಡೆಗೆ ಜಂಗಮವಾಣಿಯ ಕರೆ ತೆಗೆದುಕೊಳ್ಳುವದನ್ನೇ ಬಿಟ್ಟ.....
ರಾಮಣ್ಣನು ಹಟವಾದಿ..
"ಕೊಡುವದು ಆಗುತ್ತೋ ಇಲ್ಲವೋ?" ಎಂದ
"ಆಗೋಲ್ಲಾ ಏನು ಮಾಡ್ತಿಯಾ - ಏನು ಮಹಾ ಕೋಟ್ಯಾಂತರ ರುಪಾಯಿ ಕೊಟ್ಟವರ ಹಾಗೆ ಬೆನ್ನು ಹತ್ತಿದ್ದಿಯಾ -ಇಷ್ಟು ದಿನ ಕೊಡದೆ ಹೀಗೆ ಸತಾಯಿಸಿದರೂ, ಇನ್ನು ಇವನು ಕೊಡುವದಿಲ್ಲ- ಎಂದು ತಿಳಿದುಕೊಂಡು ಕೇಳುವದನ್ನ ಬಿಡುತ್ತಿಯಾ ಎಂದರೆ, ಪದೇ ಪದೇ ಕೋಟ್ಯಾಂತರ ದುಡ್ಡು ಕೊಟ್ಟವನ ಹಾಗೆ ಕೇಳ್ತಿಯಲ್ಲಾ ಸ್ವಲ್ಪವು ಸಾಮಾನ್ಯ ಜ್ಞಾನ ಇಲ್ಲವಾ !! " ಅಂಥಾ ದಬಾಯಿಸೋದ ಭಂಡ ನುಂಗಣ್ಣ.
ಈ ಉತ್ತರವನ್ನ ನೀರಿಕ್ಸಿಸದೆ ಇದ್ದ ರಾಮಣ್ಣಗೆ ಕೆನ್ನೆಗೆ ಬಾರಿಸಿದಂತಿತ್ತು....
" ಐದು ಅಂಕಿ ಸಂಬಳ ತಗೊಳ್ಲ್ಲೋ ನೀನು ಜುಜುಬಿ ೨೦೦೦ ರೂಪಾಯಿಗೆ ಒಳ್ಳೆ ಶನಿ ಬೆನ್ನು ಹತ್ತಿದ ಹಾಗೆ ಕಳೆದ ಒಂದು ವರ್ಷದಿಂದ ಸತಾಯಿಸ್ತಾ ಇದ್ದಿಯಾ... ಸ್ವಲ್ಪವು ಅರ್ಥ ಆಗೋಲ್ವಾ .... ಇಷ್ಟು ದಿನ ಕೊಡದೆ ಇದ್ದದ್ದು ನೋಡಿ ಸೂಕ್ಷ್ಮವಾಗಿ, ಇವನು ಕೊಡೋನಲ್ಲ ಅನ್ಕೊಂಡು, ಹೋಗಲಿ ಬಿಡು, ಎಂದು ತೆಪ್ಪಗಿರೋದು ಬಿಟ್ಟು ಪದೇ ಪದೇ ಕೇಳ್ತಿಯಲ್ಲಾ ನಾಚಿಕೆ ಆಗಲ್ವಾ.. " ಮತ್ತೆ ದಬಾಯಿಸಿದ.
ಅಲ್ಲಿವರೆಗೆ ಸಾರ್ ಎಂದು ಮಾತಾಡುತ್ತಿದ್ದ ನುಂಗಣ್ಣ ಈ ತರ ಏಕವಚನದಲ್ಲಿ ಅದು ಈ ರೀತಿ ದಬಾಯಿಸೋದನ್ನ ಕಲ್ಪಿಸದ ರಾಮಣ್ಣಗೆ ಆಘಾತವಾಗಿತ್ತು.
"ನೀ ನನ್ನ ಹಣ ಕೊಡದಿದ್ದರೂ ಸರಿ ಈ ರೀತಿ ಏಕವಚನದಲ್ಲಿ ಮಾತಾಡೋದು ತಪ್ಪು ಅಲ್ಲದೆ ಪದೇ ಪದೇ ನಾಳೆ ಎಂದು ಹೇಳುವ ಬದಲು ಮೊದಲೇ ಹೇಳಬೇಕಿತ್ತು " ಅಂಥಾ ತಡವರಿಸುತ್ತಾ ಅವನಿಗೆ ಏನು ಉತ್ತರಿಸಬೇಕು ಎಂದು ತಿಳಿಯದೆ ರಾಮಣ್ಣ ತೊದಲಿದ.
" ಅಯ್ಯಿತು ಸಾರ ನಿಮ್ಮ ಹಣ ಅಷ್ಟೆ ಅದು ಬರೋಲ್ಲ ಸುಮ್ಮನೆ ಹೋಗಿ" ಎಂದು ಮರ್ಯಾದೆಯಲ್ಲಿ ಹೇಳಿದ ನುಂಗಣ್ಣ.
ಸಧ್ಯ ಮರ್ಯಾದೆ ಸಿಕ್ಕಿತಲ್ಲ ಹಣ ಹೋದರೂ ಸಹಾ ಎಂದು ಸಮಾಧಾನಿಸುತ್ತಾ ರಾಮಣ್ಣ ಅಲ್ಲಿಂದ ಕಾಲ್ಕಿತ್ತಿದ್ದ.
ಈಗ ಕೆಲವು ದಿನಗಳಿಂದ ನುಂಗಣ್ಣನಹೊಸ ಮಹಡಿ ಮನೆ ಕಟ್ಟಡ ಭರದಿಂದ ಏರುತ್ತಿದೆ.
ರಾಮಣ್ಣ ಆ ಮನೆ ಮುಂದೆ ತಿರುಗಾಡುವಾಗ ಮನದಲ್ಲೇ ಅಂದುಕೊಳ್ಳುತ್ತಾನೆ "ಈ ಕಟ್ಟಡದಲ್ಲಿ ನನ್ನದು ಸ್ವಲ್ಪ ಅಳಿಲು ಸೇವೆ ಇದೆ ಹಾಗೂ ನನ್ನಂತವರ ಅಳಲಿದೆ"
ರಾಮಣ್ಣನಂತಹವರು ಹಲವಾರು ಜನವು ಹೀಗೆ ಅಂದುಕೊಂಡಿರಬಹುದು ಅಲ್ಲಿ ತಿರುಗಾಡುವಾಗ.
ನುಂಗಣ್ಣನಿಗೆ ಅದರ ಪರಿವೆ ಇಲ್ಲ!!
"ಸಾರ್ ನನ್ನ ಮನೆ ಗ್ರಹ ಪ್ರವೇಶಕ್ಕೆ ಬರಬೇಕು -ಉಟಕ್ಕೆ ತಪ್ಪಿಸಬಾರದು -ಅಕ್ಕವ್ರನ್ನು ಕರೆತರಬೇಕು" ನುಂಗಣ್ಣನ ಆಗ್ರಹ ರಾಮಣ್ಣಗೆ.
ರಾಮಣ್ಣ ಅಂದುಕೊಂಡಿದ್ದು- "ಬಹುಶಃ ನುಂಗಣ್ಣನಿಗೆ ಮನದಲ್ಲೆಲ್ಲೋ ಪಶ್ಚಾತಾಪವಿರಬೇಕು ನನ್ನ ಹಣ ಮುಳುಗಿಸಿದ ಬಗ್ಗೆ ಅದಕ್ಕೆ ಕರೆಯುತ್ತಿದ್ದಾನೆ ಎಂದು"
ನುಂಗಣ್ಣ ಅಂದುಕೊಡದ್ದೇ ಬೇರೆ ಲೆಕ್ಕಾಚಾರ " ರಾಮಣ್ಣನಂತಾ ಜನ ಸಮಾರಂಭಕ್ಕೆ ಬಂದರೆ ಒಳ್ಳೆ ಉಡುಗೊರೆ ಜೊತೆ ಅವನ ತೂಕವು ಹೆಚ್ಚುತ್ತೆ ಹೀಗೆ ತೂಕ ಹೆಚ್ಚಿದರೆ ಹೊಸ ಬಕರಾಗಳನ್ನು ಹಿಡಿಯಬಹುದು ಅಥವಾ ರಾಮಣ್ಣನೆ ಹಳೆಯದನ್ನ ಮರೆತು ಇನ್ನೊಮ್ಮೆ ಬಕರಾ ಆಗಬಹುದು "

20 comments:

Deep said...

ಮಸ್ತು ಮಜಾ ಇತ್ತು ...
ನುಂಗಣ್ಣ ದಬಾಯಿಸಿದ ಪರಿ ಚನ್ನಾಗಿ ನಿರೂಪಿತವಾಗಿದೆ
ಈ ಗೋಸುಂಬೆ ಗಳ ಹಾವಳಿ ಅಪಾರ..
ಕೋಡಂಗಿಗಳೂ ತುಂಬಾನೇ ಇದ್ದಾರೆ :-)

Pradeep Rao said...

ಹ್ಹಾಹ್ಹಾ ಹ್ಹ! ಪಾಪ ರಾಮಣ್ಣ.. ನುಂಗಣ್ಣನ ಕಪಟ ಮನದ ಭಾವಗಳನ್ನು ಚೆನ್ನಾಗಿ ತೋರಿಸಿದ್ದೀರಿ.. ಬಹಳ ದಿನದ ಮೇಲೆ ನಿಮ್ಮ ಬ್ಲಾಗ್ನಲ್ಲಿ ಹೊಸ ಲೇಖನ ಕಂಡು ಸಂತಸವಾಯಿತು.. ಬರೆಯುತ್ತಿರಿ..

balasubramanya said...

ಇತ್ತೇಚೆಗೆ ಯಾಕೋ ಇಂತಹ ಕಪಟ ನುಂಗಣ್ಣ ಗಳ ಹಾವಳಿ ಜಾಸ್ತಿಯಾಗಿದೆ. ಸಾರ್ !!!!!ವಿವಿಧ ತರಹದ ನುಂಗಣ್ಣ ಗಳ ಸಂತೆ ಇದರ ಅನುಭವ ಪಡೆದ ಹಲವರು ಹೇಳಿಕೊಳ್ಳಲು ನಾಚಿಕೆ ಪಟ್ಟು ಸಂಕಟ ಅನುಭವಿಸುತ್ತಿದ್ದಾರೆ.ನಿಮ್ಮ ಕಥೆಯ ನುಂಗಣ್ಣ ಪಾಪ ಮನೆ ಕಟ್ಟಿ ಗೃಹ ಪ್ರವೆಶಕ್ಕಾದರೂ ಕರೆದಿದ್ದಾನೆ.ಹ ಹ ಹ ಪಾಪ ಒಳ್ಳೆಯ ನುಂಗಣ್ಣ !!!! ನಿಮ್ಮ ಲೇಖನ ಕೆಲವರಿಗೆ ಚಾಟಿ ಬೀಸಿದೆ. ಗುಡ್

Manju M Doddamani said...

ಹ್ಹ ಹ್ಹ ಹ್ಹ ಕೊಟ್ಟೋನು ಕೋಡಂಗಿ ಇಸಕೊಂಡೋನು ವೀರಭದ್ರ...! ಚನ್ನಾಗಿದೆ ಚನ್ನಾಗಿದೆ ನಿಮ್ಮ ರಾಮಣ್ಣ ನುಂಗಣ್ಣ ಕಥೆ

Gubbachchi Sathish said...

ಚೆನ್ನಾಗಿದೆ ಸರ್.

ದಿನಕರ ಮೊಗೇರ said...

chennaagide.......... tumbaa chennaagide chaaTi bisida riti....

churuku muTTiratte biDi...

ಅನಂತ್ ರಾಜ್ said...

ಬಕರಾ ಮ೦ದಿಗಳು ಇರೋವರೆಗೂ ನಖರಾ ಮ೦ದಿಗಳ ಆಟ ನಡೆಯೋದಾ.. ಛಲೋ ಬರದೀರಿ. ಅಭಿನ೦ದನೆಗಳು.

ಅನ೦ತ್

shivu.k said...

ಸೀತಾರಾಂ ಸರ್,

ಇಂಥ ನನಗೂ ಆಗಿದೆ. ಇಂಥವರಿಂದ ನಾವು ದೂರವಿರಬೇಕು. ಎಲ್ಲರಿಗೂ ಇದು ಎಚ್ಚರಿಕೆಯ ಪಾಠ. ಕಣ್ತೆರೆಸುವ ಲೇಖನ.

Ittigecement said...

ಸೀತಾರಾಮ್ ಸರ್...

ನುಂಗಣ್ಣನ ಅನುಭವ ಪ್ರತಿಯೊಬ್ಬರಿಗೂ ಆಗಿರುತ್ತದೆ..
ಆಗುತ್ತಿರುತ್ತದೆ..
ಬೇಡವೆಂದರೂ ಸಿಗುತ್ತಾರೆ ಅಲ್ಲವೆ?

ಕಥನ ಚೆನ್ನಾಗಿ ಮೂಡಿ ಬಂದಿದೆ...

Dr.D.T.Krishna Murthy. said...

ಸೀತಾರಾಂ ಸರ್;ಚೆಂದದ ಕಥನ.ನನ್ನ ಬ್ಲಾಗಿಗೆ ಬನ್ನಿ.ನಮಸ್ಕಾರ.

ಮನಸು said...

ಸೂಪರ್ ಮಸ್ತಾಗಿದೆ... ರಾಮಣ್ಣ ಇಂಗು ತಿಂದ ಮಂಗನಾದ... ನರಿ ಬುದ್ಧಿಯಿಂದ ನುಂಗಣ್ಣ ನುಂಗಿ ನೀರು ಕುಡಿದ ಹಹಹ ಸಖತ್ ಕಥೆ ....

Subrahmanya said...

ಬರಿತೀನಿ ಬರಿತೀನಿ ಅಂತಾ ಹೇಳ್ತಾ ಕೊನೆಗೂ ಬರೆದು ಈರಭದ್ರ ಆದ್ರಿ !. ಬಹಳ ದಿನಗಳ ನಂತರ ಒಂದು ಸಂದೇಶದೊಡನೆ ತಿಳಿವು ಮೂಡಿಸಿದಿರಿ.

ಸವಿಗನಸು said...

eerbhadrana kathe chennagide....

sunaath said...

ನುಂಗಣ್ಣಗಳ ಹಾವಳಿಯನ್ನು ಬಲು ಚೆನ್ನಾಗಿ ಚಿತ್ರಿಸಿದ್ದೀರಿ. ಇವರೇ ನಾಳಿನ ರಾಜಕೀಯ ನಾಯಕರು!

ಮನದಾಳದಿಂದ............ said...

Nungannana kaata ee naduve jaasti aagta ide.......
nanagoo obba nunganna sikkiddane, nunguva taraturiyalliddaane!!!

aadare naanu raamannanallavalla???

hha hha hhaa....
Super

ಸುಮ said...

oLLeya lEkhana :)

ಜಲನಯನ said...

ಬಕರಾ ಆಗೋವವರು ಇರುವವರೆಗೆ ನುಂಗಣ್ಣಗಳು ಹಾದಿಗೊಬ್ಬ ಬೀದಿಗೊಬ್ಬ...ಉದಾಹರಣೆ ಹಲವು.... ಸೀತಾರಾಂ ಸರ್ ನಮ್ಮ ಸುತ್ತಮುತ್ತ ನಡೆಯೋ ಘಟನೆಯಂತಿದೆ.....

ಈಶ್ವರ said...

chennagide ... :)

ಶಿವರಾಮ ಭಟ್ said...

ಸೀತಾರಾಂ ಸರ್,
ಸುಮ್ಮನೆ ಒತ್ತಾಯಮಾಡಿ ಮನೆಗೆ ಕರೆದು ಮರ್ಯಾದೆ ತೋರಿಸಿ, ಮಕ್ಕಳಿಗೆ ನಮಗೆ ಮೂರುಕಾಸಿನ ಗಿಫ್ಟ್ ಕೊಟ್ಟು ನಂತರ ಇನ್ಸೂರೆನ್ಸ್ ಪಾಲಿಸಿ ಮಾಡಿಸಿ ಅನ್ನುವ ದಲ್ಲಾಳಿಗಳ ನೆನಪಾಯ್ತು.
ತುಂಬಾ ಸರಳವಾಗಿ ವಾಸ್ತವಕ್ಕೆ ಹತ್ತಿರವಾಗಿರುವ ಲೇಖನ. ತುಂಬಾ ಚೆನ್ನಾಗಿದೆ.
ಶಿವರಾಮ ಭಟ್

V.R.BHAT said...

chennaagide saahebre!